ಬೆಂಗಳೂರು : ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಈ ಬೆಳವಣಿಗೆಯೊಂದಿಗೆ ಪರಿಸರ ಸವಾಲುಗಳೂ ಹೆಚ್ಚಾಗಿವೆ ಹಾಗಾಗಿ ನಗರವನ್ನು ಸುಸ್ಥಿರ ಮತ್ತು ಹಸಿರು ನಗರವನ್ನಾಗಿ ರೂಪಿಸಲು ಎಲ್ಲರೂ ಕೈಜೋಡಿಸೋಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ನಗರದ ರಾಡಿಸನ್ ಬ್ಲೂ ಏಟ್ರಿಯಾ ಹೋಟೆಲ್ ನಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಮತ್ತು ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (TERI) ಸಹಯೋಗದೊಂದಿಗೆ “ಹವಾಮಾನ ಸ್ಥಿತಿಸ್ಥಾಪಕ ಪ್ರಪಂಚಕ್ಕಾಗಿ ಕಾರ್ಯನಿರ್ವಹಿಸಲು ನಾವೀನ್ಯತೆ” ಎಂಬ ಘೋಷ ವಾಕ್ಯದೊಂದಿಗೆ ನಡೆದ 7ನೇ ಗ್ರಿಹ ಪ್ರಾದೇಶಿಕ ಸಮಾವೇಶದಲ್ಲಿ(Green Rating for Integrated Habitat Assessment) ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು ಇದು ಹಸಿರು ಕಟ್ಟಡಗಳ ನಿರ್ಮಾಣ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಮಾವೇಶವು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ನಾವೀನ್ಯಪೂರ್ಣ ಪರಿಹಾರಗಳನ್ನು ಕಂಡುಕೊಳ್ಳಲು ಒಂದು ಪ್ರಮುಖ ವೇದಿಕೆಯಾಗಿದೆ ಎಂದರು.
ಹವಾಮಾನ ಬದಲಾವಣೆಯ ಪ್ರಭಾವವು ನಮ್ಮ ಜನರ ಮೇಲೂ ಭಾರಿ ಪರಿಣಾಮ ಬೀರುತ್ತದೆ. ಆಗಾಗಿ ನಾವು ಹೇಗೆ ಸಮತೋಲನವನ್ನು ಕಂಡುಕೊಳ್ಳಬೇಕು, ಜಲಸಂಕಷ್ಟ, ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ದಟ್ಟಣೆ ಇವು ನಮ್ಮ ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿದ್ದು, ಈ ಸಮಾವೇಶವು ಈ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಚರ್ಚಿಸಲು ಮತ್ತು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಲಿದೆ, ‘ಹವಾಮಾನ ಸ್ಥಿತಿಸ್ಥಾಪಕತ್ವವುಳ್ಳ ವಿಶ್ವಕ್ಕಾಗಿ ನಾವೀನ್ಯತೆಯಿಂದ ಕಾರ್ಯನಿರ್ವಹಿಸುವುದು’ ಎಂಬ ಈ ವರ್ಷದ GRIHA ಸಮಾವೇಶದ ಘೋಷ ವಾಕ್ಯ ಅತ್ಯಂತ ಪ್ರಸ್ತುತವಾಗಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ನಾವು ಹಸಿರು ತಂತ್ರಜ್ಞಾನಗಳು, ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಪರಿಸರ ಸ್ನೇಹಿ ನಿರ್ಮಾಣ ವಿಧಾನಗಳನ್ನು ಪ್ರೋತ್ಸಾಹಿಸಲು ಬದ್ಧವಾಗಿದ್ದೇವೆ, ಕಟ್ಟಡ ನಿರ್ಮಾಣದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಕೇವಲ ಪರಿಸರ ಸಂರಕ್ಷಣೆಗಾಗಿ ಮಾತ್ರವಲ್ಲ, ಅದು ಆರ್ಥಿಕವಾಗಿಯೂ ಲಾಭದಾಯಕವಾಗಿದೆ. ಹಸಿರು ಕಟ್ಟಡಗಳು ಇಂಧನ ಉಳಿತಾಯಕ್ಕೆ, ನೀರಿನ ದಕ್ಷ ಬಳಕೆಗೆ ಮತ್ತು ಉತ್ತಮ ಜೀವನ ಗುಣಮಟ್ಟಕ್ಕೆ ಕೊಡುಗೆ ನೀಡುತ್ತವೆ ಎಂದು ಸಚಿವರು ತಿಳಿಸಿದರು.
ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ತಜ್ಞರು, ನೀತಿ ನಿರೂಪಕರು, ವಾಸ್ತುಶಿಲ್ಪಿಗಳು, ಇಂಜಿನಿಯರ್ಗಳು ಮತ್ತು ಪರಿಸರ ಪ್ರೇಮಿಗಳು ತಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಸಹಕರಿಸಲಿದ್ದಾರೆ ಇಂತಹ ಒಳ್ಳೆಯ ಸಮಾವೇಶವು ಯಶಸ್ವಿಯಾಗಲಿ ಎಂದು ನುಡಿದರು.