ಶಿವಮೊಗ್ಗ: ಮೀನು ಹಿಡಿಯಲು ತೆರಳಿದ್ದಂತ ಮಂಜುನಾಥ್ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ ಮಾಡಿದ್ದು ಸಾಗರ ತಾಲ್ಲೂಕಿನಲ್ಲಿ ರಾಜಕೀಯ ಸ್ವರೂಪವನ್ನು ಪಡೆದಿತ್ತು. ಆದರೇ ಮಂಜುನಾಥ್ ಮೇಲೆ ಯಾವುದೇ ಹಲ್ಲೆಯನ್ನು ಮಾಡಿಲ್ಲ ಎಂಬುದಾಗಿ ಸಾಗರದ ಕಾರ್ಗಲ್ ನ ವೈಲ್ಡ್ ಲೈಫ್ ಆರ್ ಎಫ್ ಒ ಸಂತೋಷ್ ಪವಾರ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಮೇ.31ರಂದು ಡಿಆರ್ ಎಫ್ ಅವರು ಗಸ್ತು ತೆರಳುತ್ತಿದ್ದಂತ ಸಂದರ್ಭದಲ್ಲಿ ಕಾಡಿನಲ್ಲಿ ನಾಡ ಬಂದೂಕು, ಕತ್ತಿಯೊಂದಿಗೆ ಮಂಜುನಾಥ್ ಹಾಗೂ ರಾಮು ಸಿಕ್ಕಿಬಿದ್ದಿದ್ದಾರೆ. ಮತ್ತೊಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಿ ಜೂನ್.1ರಂದು ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ಜಾಮೀನು ಮಂಜೂರು ಮಾಡಿತ್ತು ಎಂಬುದಾಗಿ ತಿಳಿಸಿದರು.
ಮೇ.31ರಂದು ವಶಕ್ಕೆ ಪಡೆದಿದ್ದಂತ ಮಂಜುನಾಥ್, ರಾಮು ಎಂಬುವರನ್ನು ಜೂನ್.1ರಂದು ಯಾವುದೇ ಹಲ್ಲೆ ಮಾಡದೇ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು, ಅವರ ಪರ ವಕೀಲರ ಮುಂದೆಯೇ ಅರಣ್ಯ ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆಯೇ ಅಂತ ಪ್ರಶ್ನಿಸಿದ್ದರು. ಅಂದು ಇಲ್ಲ ಎಂಬುದಾಗಿಯೂ ಹೇಳಿಕೆಯನ್ನು ಆರೋಪಿಗಳು ನೀಡಿದ್ದರು. ಇಂದು ಮಾಡುತ್ತಿರುವ ಹಲ್ಲೆ ಆರೋಪ ಸುಳ್ಳು, ನಿರಾಧಾರವಾಗಿದೆ. ನಮ್ಮ ಸಿಬ್ಬಂದಿಗಳು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಡಿ ಆರ್ ಎಫ್ ಮೈಲಾರಪ್ಪ ಮಾತನಾಡಿ ಮೇ.31ರಂದು ರಾತ್ರಿ ಸುಮಾರು 12.30ರ ವೇಳೆಗೆ ಕಾರ್ಗಲ್ ವೈಲ್ಡ್ ಲೈಫ್ ಅರಣ್ಯ ವ್ಯಾಪ್ತಿಯ ಮೂರಕ್ಕಿ ಅರಣ್ಯ ಪ್ರದೇಶದ ಬಳಿ ಗಸ್ತಿಗೆ ತೆರಳಾಗಿತ್ತು. ಗಸ್ತು ಅರಣ್ಯ ಪಾಲಕ ಮಹೇಶ್, ಪರಶುರಾಮ್, ಎಪಿಸಿ ವಾಚರ್ ಅಣ್ಣಪ್ಪ, ರೇವಣ್ಣಪ್ಪ, ನಿರಂಜನ್, ಶ್ರವಣ ಜೊತೆಗೆ ಇದ್ದರು. ಅಂದು ಕಾಡಿನಿಂದ ಹಣೆ ಬ್ಯಾಟರಿಯ ಬೆಳಕು ಕಾಣಿಸಿಕೊಂಡಿತ್ತು. ವಾಹನ ನಿಲ್ಲಿಸಿ ಸಿಬ್ಬಂದಿಗಳೊಂದಿಗೆ ಬೆಳಕು ಬರುತ್ತಿದ್ದಂತ ಕಡೆಗೆ ತೆರಳಿದ್ದೆವು. ಆಗ ಆರೋಪಿತರು ಓಡೋದಕ್ಕೆ ಪ್ರಾರಂಭಿಸಿದರು. ಅನುಮಾನಗೊಂಡು ಸಿಬ್ಬಂದಿ ಹಿಮ್ಮೆಟ್ಟಿ ಹಿಡಿದ್ದೇವೆ ಎಂದರು.
ಮಂಜುನಾಥ್ ಹಾಗೂ ರಾಮು ಎಂಬುವರು ಸಿಕ್ಕಿಬಿದ್ದಿದ್ದರು. ಮತ್ತೊಬ್ಬ ಆರೋಪಿ ಆದಿ ಎಂಬಾತ ಪರಾರಿಯಾಗಿದ್ದನು. ವಿಚಾರಣೆಗೆ ಒಳಪಡಿಸಿದಾಗ ಮೀನು ಹಿಡಿಯಲು ಬಂದಿದ್ದಾಗಿ ತಿಳಿಸಿದ್ದರು. ಆದರೇ ಕೈಯಲ್ಲಿ ವಿಶೇಷ ವಿನ್ಯಾಸದ ಗುಂಡು ತುಂಬಿದ್ದಂತ ಎರಡು ನಾಡ ಬಂದೂಕು, ಕತ್ತಿ ಇದ್ದದ್ದು ಕಂಡು ಅನುಮಾನ ಬಂದು ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಕರೆತರಲಾಗಿತ್ತು. ವಿಚಾರಣೆಯ ಬಳಿಕ ಜೂನ್.1, 2025ರಂದು ಮಂಜುನಾಥ್, ರಾಮು ಹಾಗೂ ಪರಾರಿಯಾಗಿದ್ದಂತ ಆದಿ ಎಂಬಾತನ ಮೇಲೆ ಕೇಸ್ ದಾಖಲಿಸಲಾಗಿತ್ತು. ಆ ಬಳಿಕ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಬಂಧಿತ ಆರೋಪಿಗಳಿಗೆ ಇಸಿಜಿ ಸೇರಿದಂತೆ ಎಲ್ಲಾ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ವೈದ್ಯಕೀಯ ವರದಿಯನ್ನು ಪಡೆದು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು ಎಂದು ಹೇಳಿದರು.
ನಾವು ಮಂಜುನಾಥ್ ಅಥವಾ ರಾಮು ಮೇಲೆ ಆಗಲೀ ಹಲ್ಲೆ ಮಾಡಿಲ್ಲ. ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಸುಳ್ಳು. ಹಲ್ಲೆ ಮಾಡುವಂತ ಸಂದರ್ಭವೂ ಬಂದಿಲ್ಲ. ಅಂದು ಆರೋಪಿಗಳನ್ನು ಹಿಡಿಯುವಂತ ಸಂದರ್ಭದಲ್ಲಿ ಅವರ ಬಳಿಯಿದ್ದಂತ ಹತಾರ ತಗುಲಿ ಗಸ್ತು ಅರಣ್ಯ ಪಾಲಕ ಮಹೇಶ್ ತುಟಿಗೆ ಗಾಯವಾಗಿದೆ ಎಂಬುದಾಗಿ ತಿಳಿಸಿದರು.
ಅಂದಹಾಗೇ ನಿನ್ನೆ ಅರಣ್ಯಾಧಿಕಾರಿಗಳು ಹಲ್ಲೆ ಮಾಡಿದ್ದರಿಂದ ಎದೆ ನೋವು ಉಂಟಾಗಿ ಆಸ್ಪತ್ರೆಗೆ ಮಂಜುನಾಥ್ ದಾಖಲಾಗಿದ್ದರು. ಅವರನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ವಿವಿಧ ರಾಜಕೀಯ ನಾಯಕರು ಪಕ್ಷಾತೀತವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೇ ಮಂಜುನಾಥ್ ಮೇಲೆ ಹಲ್ಲೆ ಮಾಡಿದಂತ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದಲ್ಲದೇ ಮಂಜುನಾಥ್ ನೀಡಿದಂತ ದೂರಿನ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ದೂರು ದಾಖಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?