ಕಲಬುರ್ಗಿ : ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆ ಅದರ ದೃಢಿಕರಣ ಪತ್ರಕ್ಕೆ ಗುತ್ತಿಗೆದಾರನ ಬಳಿ 1 ಲಕ್ಷ ಪಡೆಯುವ ವೇಳೆ ತಹಸೀಲ್ದಾರ್ ಕಚೇರಿಯ ಮುಜರಾಯಿ ವಿಭಾಗದ ಎಸ್ ಡಿ ಎ ನೌಕರನೊಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಕಾಳಗಿಯಲ್ಲಿ ನಡೆದಿದೆ.
ಕಾಳಗಿ ತಾಲೂಕಿನ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ಪಂಚಾಯತ್ ರಾಜ್ ಇಲಾಖೆಯ 8 ಲಕ್ಷ ರೂ. ಅನುದಾನದಡಿ ನಿರ್ಮಿಸಲಾದ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ದೃಢೀಕರಣ ಪತ್ರ ನೀಡಲು ಒಂದು ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಗುತ್ತಿಗೆದಾರ ಅಣವೀರಯ್ಯ ಹಿರೇಮಠ ಅವರು ಕಾಮಗಾರಿ ಪೂರ್ಣಗೊಳಿಸಿರುವ ಪ್ರಮಾಣ ಪತ್ರ ನೀಡುವಂತೆ ತಹಸಿಲ್ ಕಚೇರಿಗೆ ಅಲೆದಾಡುತ್ತಿದ್ದ. ಆದರೆ ವಿಳಂಬ ಧೋರಣೆಯಿಂದ ಸುಸ್ತಾಗಿ ಲಕ್ಷ ರೂ. ಲಂಚ ಕೊಡಲು ದೂರುದಾರ ಒಪ್ಪಿದ್ದರು.
ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ ನೇತೃತ್ವದಲ್ಲಿ ಡಿವೈಎಸ್ಪಿ ಗೀತಾ ಬೇನಹಾಳ, ಶೀಲವಂತ ಹೊಸಮನಿ, ಪಿಐ ರಾಜಶೇಖರ ಅವರಿದ್ದ ತಂಡ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿ ಅವರ ಮನೆಯಲ್ಲಿ ಲಂಚ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ಯಾಗಿ ಸಿಕ್ಕಿಬಿದ್ದಿದ್ದರು. ಆರೋಪಿ ಶರಣಪ್ಪ ಅವರನ್ನು ಬಂಧಿಸಲಾಗಿದೆ.