ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿ ಕೊಲೆ ಆರೋಪಿ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎನ್ನುವ ಪ್ರಕರಣ ಬಾರಿ ಸದ್ದು ಮಾಡಿತ್ತು. ಅದಾದ ಬಳಿಕ ತನಿಖೆ ಕೂಡ ನಡೆದಿತ್ತು. ಇದೀಗ ಪರಪ್ಪನ ಅಗ್ರಹಾರ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಗಾಂಜಾ, ಚಾಕು, ಬ್ಲೇಡ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಹೌದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ಏಕಾಏಕಿ ದಾಳಿ ನಡೆಸಿ ಗಾಂಜಾ, ಬ್ಲೇಡ್, ಚಾಕು, ನಗದು ಹಣ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಿಸಿಬಿ ತಂಡ ಜೈಲಿನಲ್ಲಿ ತೀವ್ರ ತಪಾಸಣೆ ನಡೆಸಿದ್ದು, ಕೈದಿಗಳ ಬಳಿಯಿಂದ ಅನೇಕ ಅಸಾಧಾರಣ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ದಾಳಿ ವೇಳೆ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಂಸ್, ಮೊಳೆಗಳು, ಹರಿತವಾದ ವಸ್ತುಗಳು, ಗುಟ್ಕಾ ತಂಬಾಕು ಪ್ಯಾಕೆಟ್ಸ್, ಸುಣ್ಣದ ಡಬ್ಬಿ, ಚಾಕುಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ, ಕಬ್ಬಿಣದ ರಾಡ್ ಪತ್ತೆಯಾಗಿವೆ.ಪರಪ್ಪನ ಅಗ್ರಹಾರ ಕಾರಾಗೃಹದ ಸಜಾಬಂಧಿ ಬ್ಯಾರಕ್ ಹಾಗೂ ವಿಐಪಿ ಬ್ಯಾರಕ್ನಲ್ಲಿ ಸಿಸಿಬಿಯ ಐವತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆಸಿದ್ದಾರೆ.