ಶಿವಮೊಗ್ಗ : ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿದ್ದು ಈಗಾಗಲೇ ಚಿಕ್ಕಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಇದೀಗ ಶಿವಮೊಗ್ಗದಲ್ಲಿ ಘೋರ ದುರಂತ ನಡೆದಿದ್ದು, ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ, ವೃದ್ದೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಡರಾತ್ರಿ ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಅಡಗಡಿ ಗ್ರಾಮದಲ್ಲಿ ನಡೆದಿದೆ.
ಗೋಡೆ ಕುಸಿದು ಮೃತಪಟ್ಟ ವೃದ್ಧೆಯನ್ನು ಶತಾಯುಷಿ ಸಿದ್ದಮ್ಮ (100) ಎಂದು ತಿಳಿದುಬಂದಿದೆ. ಇವರು ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕಿನ ಕುಂಕೋವ ಗ್ರಾಮದ ನಿವಾಸಿಯಾಗಿದ್ದಾರೆ. ಇತ್ತೀಚೆಗೆ ಅಡಗಡಿ ಗ್ರಾಮದಲ್ಲಿರುವ ಸಂಬಂಧಿ ಹೇಮಾವತಿ ಎಂಬುವರ ಮನೆಗೆ ಆಗಮಿಸಿದ್ದಾಗ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಮನೆಯಲ್ಲಿದ್ದ ಹೇಮಾವತಿ ಎಂಬುವರಿಗೆ ಗಾಯವಾಗಿದ್ದು, ಅವರುನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಅವರ ಕುಟುಂಬ ಸದಸ್ಯರಾದ ಪಲ್ಲವಿ, ಪರಶುರಾಮ್, ಚೇತನ್ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.