ಮಂಡ್ಯ : ಭೂಮಿ ಮೇಲೆ ಮನುಷ್ಯನಾಗಲಿ ಅಥವಾ ಯಾವುದೇ ಜೀವಿಯೂ ಶಾಶ್ವತವಲ್ಲ. ಇರುವಷ್ಟು ದಿನ ಎಲ್ಲರಲ್ಲೂ ಸಂತೋಷದಿಂದ ಸಾರ್ಥಕ ಬದುಕು ನಡೆಸುವುದೇ ಪರಮೋಚ್ಚ ಕೆಲಸ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಭಾನುವಾರ ಹೇಳಿದರು.
ಮದ್ದೂರು ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಮನುಷ್ಯನಿಗೆ ಮೊದಲು ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ ನಿಷ್ಠೆ ಇಲ್ಲದೆ ಹಾಗೂ ಪ್ರಾಮಾಣಿಕತೆ ಇಲ್ಲದಿದ್ದರೆ ಎಷ್ಟು ದೊಡ್ಡ ದೇವಾಲಯ ಕಟ್ಟಿದರೂ ವ್ಯರ್ಥವಾಗುತ್ತದೆ. ಸಂಪನ್ಮೂಲಗಳನ್ನು ಕ್ರೋಡೀಕರಿಸಿ ದೇವಾಲಯ ಕಟ್ಟುವುದು ದೊಡ್ಡ ವಿಚಾರವಲ್ಲ. ಸಂಸ್ಕಾರದಿಂದ ಬದುಕುವುದು ಮುಖ್ಯ ಎಂದರು.
ಜನತೆ ಸನ್ಮಾರ್ಗಗಳಲ್ಲಿ ನಡೆಯಬೇಕು ತನ್ನ ಸುತ್ತಮುತ್ತಲಿನ ಜನ ಹಾಗೂ ಪರಿಸರವನ್ನು ಸಂತೋಷವಾಗಿಡಲು ಸಕಲರೂ ಪ್ರಯತ್ನಿಸಬೇಕು. ಅದು ಬಿಟ್ಟು ದ್ವೇಷ, ಅಸೂಯೆ ಅಥವಾ ಸ್ವಾರ್ಥ ಬದುಕು ಸಲ್ಲದು ಆಗ ಮಾತ್ರ ಸಮಾಜದಲ್ಲಿ ಸುಭಿಕ್ಷೆಯಿಂದ ಇರಲು ಸಾಧ್ಯವಾಗುತ್ತದೆ, ಸದ್ವಿಚಾರಗಳು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯುತ್ತದೆ ಎಂದರು. ಸಾವಿರಾರು ವರ್ಷಗಳ ಹಿನ್ನೆಲೆಯಿರುವ ಶ್ರೀ ಸಿದ್ದರಾಮೇಶ್ವರ ದೇವಸ್ಥಾನವನ್ನು ಶ್ರೀ ಪಟ್ಟಲದಮ್ಮ ಟ್ರಸ್ಟ್ ನ ಪದಾಧಿಕಾರಿಗಳು ಅತ್ಯಂತ ಸುಂದರವಾಗಿ ನಿರ್ಮಿಸಿ ಪುನರ್ ಪ್ರತಿಷ್ಠೆ ಮಾಡುತ್ತಿರುವುದು ಅತ್ಯಂತ ಮಹತ್ವದ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳನ್ನು ನಿರ್ಮಿಸಿ ಭಕ್ತಿಯಿಂದ ದೇವರನ್ನು ಪೂಜಿಸಿದರೆ ಇಷ್ಟಾರ್ಥ ದೊರೆಯುತ್ತದೆ. ದೇವರಲ್ಲಿ ಆಧ್ಯಾತ್ಮಿಕತೆ ಬರಲು ದೇವಸ್ಥಾನಗಳು ಮೂಲ ಕೇಂದ್ರಗಳಾಗಿವೆ ಜತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಧರ್ಮ, ಆಚಾರ ವಿಚಾರ, ಸದ್ವಿಚಾರಗಳನ್ನು ಜನತೆ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಊರಿಗೊಂದು ಕೆರೆ, ಊರಿಗೊಂದು ದೇವಸ್ಥಾನವಿರಬೇಕು ಎಂದು ನಮ್ಮ ಪೂರ್ವಜರು ಬಹಳ ಹಿಂದೆಯೇ ಹೇಳಿದ್ದಾರೆ ಅದನ್ನು ಮುಂದುವರೆಸಿಕೊಂಡು ಹೋಗುವ ಮನೋಭಾವವನ್ನು ಯುವ ಜನತೆ ಸೇರಿದಂತೆ ಜನತೆ ಬೆಳೆಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಜಿಲ್ಲೆಯು ಅದರಲ್ಲಿಯೂ ಮದ್ದೂರು ತಾಲೂಕು ನನ್ನ ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮರುಜನ್ಮ ನೀಡಿದೆ, ಇಂದು ಅವರು ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವುದಕ್ಕೆ ನಿಮ್ಮ ಆಶೀರ್ವಾದವೇ ಕಾರಣ. ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಋಣತೀರಿಸುವುದಕ್ಕೆ ದೊಡ್ಡ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಗುರಿ ಹೊಂದಿದ್ದಾರೆ ಎಂದರು.
ಪಟ್ಟಲದಮ್ಮದೇವಿ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ಕೆ.ರಾಜಣ್ಣ ಮಾತನಾಡಿ, ಮಾದನಾಯಕನಹಳ್ಳಿಯಲ್ಲಿ ಶ್ರೀ ಸಿದ್ದರಾಮೇಶ್ವರ ಸ್ವಾಮಿ ನೂತನ ದೇಗುಲ ಸುಂದರವಾಗಿ ನಿರ್ಮಾಣವಾಗಲು ದಾನಿಗಳು, ಭಕ್ತಾಧಿಗಳು, ಗ್ರಾಮಸ್ಥರು ಸೇರಿದಂತೆ ಹಲವಾರು ಮಂದಿ ಕೈ ಜೋಡಿಸಿದ್ದಾರೆ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಗಲಿರುಳು ದುಡಿದಿದ್ದಾರೆ ಹೀಗಾಗಿ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವರ ಪುನರ್ ಪ್ರತಿಷ್ಠ ಹಾಗೂ ಬ್ರಹ್ಮ ಕಳಶೋತ್ಸವದ ಅಂಗವಾಗಿ ಭಾನುವಾರ ದೇಗುಲದಲ್ಲಿ ಬೆಳಗ್ಗೆ ಬ್ರಹ್ಮ ಕಲಶಾಭಿಷೇಕ, ಶಿಕರ ಕಲಾಭಿಷೇಕ, ಪ್ರಸನ್ನ ಪೂಜೆ, ಮಂತ್ರಾಕ್ಷತೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿತ್ತು ಹಾಗೂ ಮಧ್ಯಾಹ್ನ ಸಹಸ್ರಾರು ಭಕ್ತಾಧಿಗಳಿಗೆ ರಾಗಿ ಮುದ್ದೆ, ಅವರೇಕಾಳು ಕೂಟು, ಒಬ್ಬಟ್ಟು, ಪಾಯಸ, ಅನ್ನ ಸಾಂಬಾರು, ಮಜ್ಜಿಗೆ ಊಟವನ್ನು ಉಡಬಡಿಸಿದ್ದು ಭಕ್ತಾಧಿಗಳ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪಟ್ಟಲದಮ್ಮದೇವಿ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ಕೆ.ರಾಜಣ್ಣ, ಕಾರ್ಯದರ್ಶಿ ಪ್ರೊ.ಮಲ್ಲಯ್ಯ, ಖಜಾಂಚಿ ಗಿರೀಶ್, ಪ್ರಧಾನ ಅರ್ಚಕ ಸೂರ್ಯನಾರಾಯಣ ದಿಕ್ಷೀತ್, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಉದ್ಯಮಿ ಸುಬ್ರಮಣ್ಯ ನಾಯ್ದು, ಮುಖಂಡರಾದ ಡಿ.ಟಿ.ಸಂತೋಷ್, ಮಹರ್ನವಮಿದೊಡ್ಡಿ ಚಂದ್ರಣ್ಣ, ಕೂಳಗೆರೆ ಶೇಖರ್, ದೇವರಾಜು, ನಾಗರಾಜು, ಶಶಿಕಲಾ ಹೊನ್ನೇಗೌಡ, ಬಿಳಿಮರಿಗೌಡ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮದ್ದೂರು ನಗರಸಭೆ ಸೇರ್ಪಡೆಗೆ ತೀವ್ರ ವಿರೋಧ: ಸೋಮನಹಳ್ಳಿ, ಗೊರವನಹಳ್ಳಿ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ
ಅಧಿಕಾರ ಇರಲಿ, ಬಿಡಲಿ ನನ್ನ ಜೀವನದ ಕೊನೆವರೆಗೂ ಕ್ಷೇತ್ರದ ಜನ ಸೇವೆ ನಿರಂತರ: ಶಾಸಕ ಕೆ.ಎಂ.ಉದಯ್