ಬೆಂಗಳೂರು : ಗೃಹ ಸಚಿವ ಜಿ ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಂದು ಜಾರಿ ನಿರ್ದೇಶನಲಯ (ED) ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದರು. ಆದರೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಗಂಭೀರವಾದ ಆರೋಪ ಮಾಡಿದ್ದು,ನಟಿ ರನ್ಯಾರಾವ್ ಗೋಲ್ಡ್ ಸ್ಮಲಿಂಗ್ ಪ್ರಕರಣಕ್ಕೂ ಇಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿಗೂ ನಂಟಿದೆ ಎಂದು ಆರೋಪಿಸಿದ್ದಾರೆ.
ಹೌದು ಗೃಹ ಸಚಿವ ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಹಿಂದೆ ರನ್ಯಾ ರಾವ್ ಕೇಸ್ ಲಿಂಕ್ ಇದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂಬ ಗಂಭೀರ ಆರೋಪ ಮಾಡಿದರು.
ಮೊದಲು ಇಡಿ ದಾಳಿ ಮುಗಿದು ತನಿಖೆ ನಡೆಯಲಿದೆ. ತನಿಖೆ ಪೂರ್ತಿ ಆದ ಮೇಲೆ ನಾವು ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸ್ತೇವೆ. ಮುಂದಿನ ಹೋರಾಟ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ತನಿಖೆ ನಡೆದ ಬಳಿಕ ಮತ್ತಷ್ಟು ವಿಷಯಗಳು ಹೊರಬರಬಹುದು. ಈ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆ. ಆದರೆ ದಾಳಿಯಿಂದ ಇವರು ಹೆದರುತ್ತಾರೆ ಎಂದು ಅನಿಸುವುದಿಲ್ಲ. ಯಾಕೆಂದರೆ ಇವರು ಲೂಟಿ ಮಾಡಲೆಂದೇ ಬಂದಿದ್ದಾರೆ ಎಂದರು.