ಬೆಂಗಳೂರು : ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವುದು ಹಾಗೂ ತುಮಕೂರಿನ ಅಭಿವೃದ್ಧಿಯ ದೃಷ್ಟಿಯಿಂದ ಮೆಟ್ರೋ ರೈಲು ಅಗತ್ಯವಾಗಿ ಬೇಕೆಬೇಕು ಎಂದು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮನವೊಲಿಸಿ, ಕಳೆದ ಬಾರಿಯ ಬಜೆಟ್ನಲ್ಲಿ ಕಾರ್ಯಸಾಧ್ಯತಾ ವರದಿಗೆ ಘೋಷಿಸಲಾಗಿತ್ತು. ಹೈದ್ರಾಬಾದ್ ಕಂಪನಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಣ ಖರ್ಚಾಗುವುದು ಸೇರಿದಂತೆ ಇನ್ನಿತರ ಸಾಧಕ-ಬಾಧಕಗಳನ್ನು ನೋಡಿ ಪರಿಶೀಲಿಸಲಾಗುತ್ತದೆ ಎಂದರು.
ತುಮಕೂರಿಗೆ ಮೆಟ್ರೋ ಯೋಜನೆ ವಿಚಾರದಲ್ಲಿ ಬೆಂಗಳೂರಿನ ಇಬ್ಬರು ಸಂಸದರು ಅನವಶ್ಯಕ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳು ನನಗೆ ಎನಂತ ಅರ್ಥವಾಗಿಲ್ಲ. ನಮ್ಮ ಉದ್ದೇಶ ಇರುವುದು, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲಾಗಿದೆ. ರಸ್ತೆ ಮೂಲಕ ತುಮಕೂರಿಗೆ ಹೋಗಲು ನಮಗೆ ಎರಡು ತಾಸು ಆಗುತ್ತಿದೆ. ಟ್ರಾಫಿಕ್ ಜಾಮ್ ಆಗುತ್ತಿದೆ. ದಿನನಿತ್ಯ ಓಡಾಡಲು ಕಷ್ಟವಾಗುತ್ತದೆ. ಮೆಟ್ರೋ ಆದರೆ, ಮುಂದಿನ ದಿನಗಳಲ್ಲಿ ಜನರ ಓಡಾಟ ಸುಲಭವಾಗುತ್ತದೆ ಎಂದು ಹೇಳಿದರು.
ಸಂಸದರು ಅಂತಾರಾಷ್ಟ್ರೀಯ ವಿಚಾರಗಳನ್ನು ತಿಳಿದುಕೊಂಡಿದ್ದಾರೆ ಎಂದು ಭಾವಿಸಿದ್ದೇನೆ. ಟೋಕಿಯೋ, ನ್ಯೂಯಾರ್ಕ್ ಸೇರಿದಂತೆ ದೊಡ್ಡ ನಗರಗಳಲ್ಲಿ ದೂರದ ಊರುಗಳನ್ನು ಅಭಿವೃದ್ಧಿಪಡಿಸುತ್ತಾರೆ. ಆ ನಗರಗಳ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ. ಅದೇರೀತಿಯ ಉದ್ದೇಶ ನಮಗೆ ಇದೆ. ಸಂಸದರು ಇದನ್ನು ಅರ್ಥ ಮಾಡಿಕೊಂಡು ಹೇಳಿಕೆಗಳನ್ನು ನೀಡುವುದು ಉತ್ತಮ ಎಂದರು.
ಕೇಂದ್ರದ ಸಚಿವರಾದ ವಿ.ಸೋಮಣ್ಣ ಬೆಂಗಳೂರಿನವರು. ತುಮಕೂರಿನ ವಿಚಾರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ರೈಲ್ವೆ ಸಚಿವರಾಗಿ ಮೆಟ್ರೋ ರೈಲು ಮಾಡಬೇಕು ಎನ್ನುವ ವಿಚಾರ ಅವರಿಗೂ ಇದೆ. ತುಮಕೂರಿನವರಾಗಿ ಮೆಟ್ರೋ ನಮಗೆ ಬೇಕೇಬೇಕು. ದಿನನಿತ್ಯ ಜನ ಕಷ್ಡಪಡುತ್ತಿದ್ದಾರೆ. ಬೆಳವಣಿಗೆಯ ದೃಷ್ಟಿಯಿಂದ ಮಾಡುತ್ತಿದ್ದೇವೆ. ಬೇರೆ ಯಾವುದೇ ದುರುದ್ದೇಶದಿಂದ ಮೆಟ್ರೋ ಮಾಡುತ್ತಿಲ್ಲ ಎಂದು ಹೇಳಿದರು.
ಬಿಡದಿ, ನೆಲಮಂಗಲ ಭಾಗದಲ್ಲಿ ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ. ಒಂದು ವೇಳೆ ನೆಲಮಂಗಲ ಭಾಗದಲ್ಲಿ ವಿಮಾನ ನಿಲ್ದಾಣವಾದರೆ ಮೆಟ್ರೋ ಅತ್ಯುತ್ತಮ ಬೆಳವಣಿಗೆ ಆಗುತ್ತದೆ. ದಾಬಸ್ಪೇಟೆ-ದೇವನಹಳ್ಳಿ ರಸ್ತೆ ಮಾರ್ಗದಲ್ಲಿ ಐದು ಸಾವಿರ ಎಕರೆ ಪ್ರದೇಶದಲ್ಲಿ ಕೆವಿನ್ ಸಿಟಿ ನಿರ್ಮಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮಗೆ ಮೆಟ್ರೋ ಬೇಕೆಬೇಕಾಗಿದೆ. ಅದಕ್ಕೆ ಯಾವ ರೀತಿಯಾದರೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಪಿಪಿಪಿ ಮಾಡೆಲ್ನಲ್ಲಿ ಯೋಜನೆ ಮಾಡಲಾಗುವುದು. ಇದರಲ್ಲಿ ಸರ್ಕಾರದ ಹೂಡಿಕೆ ಇರುವುದಿಲ್ಲ ಎಂದು ತಿಳಿಸಿದರು.
ನಗರದಲ್ಲಿ ಅಗ್ನಿ ಅವಘಡ ಸಂಭವಿಸಲು ಸಾಧ್ಯತೆಗಳಿರುವ ಪ್ರತಿಯೊಂದು ಏರಿಯಾಗಳನ್ನು ಪರಿಶೀಲಿಸಿ, ಅದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಅಗ್ನಿಶಾಮಕ ಇಲಾಖೆಗೆ ಕಠಿಣವಾದ ಸೂಚನೆಗಳನ್ನು ನೀಡಲಾಗಿದೆ ಎಂದರು.
ಶಾಸಕ ಅರವಿಂದ ಬೆಲ್ಲದ್ ಅವರು ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗುಪ್ತಚರ ಇಲಾಖೆಯವರು ಮಾಹಿತಿ ಸಂಗ್ರಹಿಸುತ್ತಾರೆ. ಕೂಡಲೇ ಕ್ರಮ ಕೈಗೊಳ್ಳುತ್ತಾರೆ. ಈ ಕುರಿತಂತೆ ಈಗಾಗಲೇ ರಾಜ್ಯದ ಎಲ್ಲ ಎಸ್ಪಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಶಂಕಿತರು ಕಂಡುಬಂದರೆ ಪರಿಶೀಲಿಸಿ, ಅವರನ್ನು ವಾಪಸ್ ಕಳುಹಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರೇ ಗಮನಿಸಿ : ನಿಮ್ಮ `ಮೊಬೈಲ್’ ಕಳ್ಳತನವಾದ್ರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿ.!
IRCTC ಸ್ವರೈಲ್ ಅಪ್ಲಿಕೇಶನ್ ಆರಂಭ: ಇದರ ಉಪಯೋಗ ಏನು ಗೊತ್ತಾ? ಇಲ್ಲಿದೆ ಮಾಹಿತಿ | IRCTC Swarail app