ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಲಾರಿ ಹರಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ನಗರಸಭೆ ಎದುರು ಇಂದು ಸಂಜೆ ನಡೆದಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ, ಮೂಲತಃ ತಾಲ್ಲೂಕಿನ ಬಿಳಿದೇಗಲು ಗ್ರಾಮದ ಬಿ.ಸಿ. ಚನ್ನಕೇಶವ ಅವರ ಪುತ್ರ ಲೇಖನ್ಗೌಡ (11) ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ.ಬಾಲಕ ಕಾರ್ಯನಿಮಿತ್ತ ತನ್ನ ತಾತ ಕುಳ್ಳೇಗೌಡನ ಜೊತೆ ಮಂಡ್ಯ ನಗರಕ್ಕೆ ಬೈಕ್ ಮೇಲೆ ಬಂದಿದ್ದ. ಕೆಲಸ ಮುಗಿಸಿಕೊಂಡು ವಾಪಾಸ್ ತೆರಳುವಾಗ ಅಕ್ಕಿ ತುಂಬಿದ ಲಾರಿ ನಗರಸಭೆ ಎದುರು ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿ ಲಾರಿಯನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಕುಳ್ಳೇಗೌಡ ಅವರನ್ನು ಮಿಮ್ಸ್ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.