ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನೋಂದಣಿ ಕಡ್ಡಾಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ಚರ್ ತಿಳಿಸಿದರು.
ವಿಧಾನ ಪರಿಷತ್ ಅಧಿವೇಶನದಲ್ಲಿ ಸದನದ ಸದಸ್ಯರಾದ ಶರವಣ, ಸಿ.ಟಿ.ರವಿ, ರವಿಕುಮಾರ್ ಮುಂತಾದವರು ನಿಯಮ 68 ರಡಿ ಮೈಕ್ರೋ ಫೈನಾನ್ಸ್ ಹಾವಳಿ , ಮೈಸೂರಿನ ಉದಯಗಿರಿ ಪ್ರಕರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರ ಕೈಗೊಂಡ ಕ್ರಮ ಕುರಿತು ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು,ಸರ್ಕಾರ ‘ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025 ಅನ್ನು ಜಾರಿಗೆ ತಂದಿದೆ. ನೋಂದಣಿಯಾಗದ, ಸುರಕ್ಷತಾ ಕ್ರಮಗಳನ್ನು ಅನುಸರಿಸದ, ಸಾರ್ವಜನಿಕರೊಂದಿಗೆ ನಿಯಮಬಾಹಿರವಾಗು ನಡೆದುಕೊಳ್ಳುವ ಮೈಕ್ರೋಫ್ ಫೈನಾನ್ಸ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದರು. ಸಾಲ ನೀಡುವ ಸಂಸ್ಥೆಗಳು ಆರ್ ಬಿ ಐ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೆಂದರು. ಇಂತಹ ಕಂಪೆನಿಗಳಿಂದ ಸಾಲಗಾರರಿಗೆ ತೊಂದರೆಯಾದಲ್ಲಿ ನಿರ್ಭೀತಿಯಿಂದ ಸಂಬಂಧಿಸಿದ ಠಾಣೆಗಳಲದಲಿ ದೂರು ದಾಖಲಿಸಬಹುದಾಗಿದೆ ಎಂದರು.
ಮೈಸೂರಿನ ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆ ದಾಳಿ ಮಾಡಿದ್ದ 15 ಜನರನ್ನು ದಸ್ತಗಿರಿ ಮಾಡಲಾಗಿದ್ದು, ಕ್ರಿಮಿನಲ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಪಿಂಕ್ ಹೊಯ್ಸಳ ಮತ್ತು 112 ಗಸ್ತುವಾಹನ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಹಾಯವಾಣಿ 1091 ಮತ್ತು ವನಿತಾ ಸಹಾಯವಾಣಿ 22943225 ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಮಹಿಳಾ ದೌರ್ಜನ್ಯ ತಡೆಯಲು ರಾಣಿ ಚೆನ್ನಮ್ಮ ತಂಡ ರಚಿಸಿದ್ದು, ಮಹಿಳೆಯರಿಗೆ ಸ್ವಯಂ ರಕ್ಷಣೆ ಹಾಗೂ ಮಾರ್ಷಿಯಲ್ ಆರ್ಟ್ಸ್ ತರಬೇತಿ ನೀಡಲಾಗುತ್ತಿದೆ ಎಂದರು.