ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಮೊಬೈಲ್ ಕಳ್ಳತನಕ್ಕೆ ಯತ್ನಿಸಿದಾಗ ವ್ಯಕ್ತಿಯೊಬ್ಬ ಪ್ರತಿರೋದ ವ್ಯಕ್ತ ಪಡಿಸಿದ್ದಾರೆ. ಈ ವೇಳೆಯಲ್ಲಿ ಮೊಬೈಲ್ ಕಳ್ಳರು ಆತನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವಂತ ಘಟನೆ ಮೆಜೆಸ್ಟಿಕ್ ನಲ್ಲಿ ನಡೆದಿದೆ.
ಹೌದು ಮೊಬೈಲ್ ಕದಿಯಲು ಪ್ರಯತ್ನಿಸಿದಾಗ ಎಚ್ಚರಗೊಂಡು ಪ್ರತಿರೋಧ ಒಡ್ಡಿದ ವ್ಯಕ್ತಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವಂತ ಬೆಚ್ಚಿ ಬೀಳಿಸೋ ಘಟನೆ ಬೆಂಗಳೂರಿನ ಹೃದಯ ಭಾಗದ ಮೆಜೆಸ್ಟಿಕ್ ನಲ್ಲಿ ನಡೆದಿದೆ.
ಕಾಮಾಕ್ಷಿ ಪಾಳ್ಯದ ವೃಷಭಾವತಿ ನಗರದ ನಿವಾಸಿ ಚಂದ್ರ(45) ಎಂಬುವರೇ ಮೊಬೈಲ್ ಕಳ್ಳರಿಂದ ಹತ್ಯೆಯಾದಂತ ವ್ಯಕ್ತಿಯಾಗಿದ್ದಾರೆ. ಇವರು ಮೆಜೆಸ್ಟಿಕ್ ನಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಟರ್ಮಿನಲ್ 1ರ 15ನೇ ಪ್ಲಾಟ್ ಫಾರ್ಮ್ ನಲ್ಲಿ ಗುರುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಬಸ್ ಗಾಗಿ ಕಾಯುತ್ತಿದ್ದಾಗ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಂದಹಾಗೇ ಮೈಸೂರು ಮೂಲಕ ಚಂದ್ರ, ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದರು. ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಗುರುವಾರ ಮಧ್ಯಾಹ್ನ ಮದ್ಯ ಸೇವಿಸಿ ಮೆಜೆಸ್ಟಿಕ್ ನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಪ್ರಯಾಣಿಕರ ಆಸನದ ಮೇಲೆ ಮಲಗಿದ್ದರು.
ಈ ವೇಳೆ ಅಲ್ಲಿಗೆ ಬಂದಂತ ಇಬ್ಬರು ದುಷ್ಕರ್ಮಿಗಳು ಅವರ ಜೇಬಿನಿಂದ ಮೊಬೈಲ್ ಕದಿಯಲು ಯತ್ನಿಸಿದ್ದಾರೆ. ಎಚ್ಚರಗೊಂಡ ಅವರು ಪ್ರತಿರೋದ ವ್ಯಕ್ತಪಡಿಸಿದ್ದಾರೆ. ಆಗ ಚಂದ್ರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ತ್ರಾವದಿಂದ ಚಂದ್ರು ಸಾವನ್ನಪ್ಪಿದ್ದಾರೆ.