ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರದ ಮದೀನಾ ನಗರದ ಬಳಿ ಭೀಮಾ ತೀರದ ಹಂತಕ ಭಾಗಪ್ಪ ಹರಿಜನ್ ಭೀಕರವಾಗಿ ಕೊಲೆಯಾಗಿತ್ತು. ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಹಂತಕರು ಭಾಗಪ್ಪನನ್ನು ಕೊಲೆ ಮಾಡಿರುವ ರಹಸ್ಯವನ್ನು ಬಾಯಿಬಿಟ್ಟಿದ್ದಾರೆ.
ಫೆಬ್ರವರಿ 11 ರಂದು ರಾತ್ರಿ ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದ ಭೀಮಾತೀರದ ಹಂತಕ ಬಾಗಪ್ಪ ಹರಿಜನನ್ನು ಪ್ರಕಾಶ ಅಲಿಯಾಸ್ ಪಿಂಟ್ಯಾ, ರಾಹುಲ ಭೀಮಾಶಂಕರ ತಳಕೇರಿ, ಸುದೀಪ ಕಾಂಬಳೆ ಹಾಗೂ ಮಣಿಕಂಠ ಅಲಿಯಾಸ್ ಗದಿಗೆಪ್ಪ ಶಂಕ್ರಪ್ಪ ಬೆನಕೊಪ್ಪ ಭಾಗಪ್ಪನನ್ನು ಕೊಡಲಿ ಮತ್ತು ತಲ್ವಾರ್ನಿಂದ ಕೊಚ್ಚಿ ಹಾಕಲಾಗಿತ್ತು. ಎಡ ಮುಂಗೈ ಕಟ್ ಆಗಿ ಬಿದ್ದಿತ್ತು. ನಂತರ ಆತನ ಮೇಲೆ ಕಂಟ್ರಿ ಪಿಸ್ತೂಲ್ನಿಂದ ಗುಂಡು ಹಾರಿಸಿ ಬಾಗಪ್ಪ ಮೃತಪಟ್ಟ ಎಂದು ದೃಢ ಪಡಿಸಿಕೊಂಡು ಪರಾರಿಯಾಗಿದ್ದರು.
ವಿಚಾರ ತಿಳಿದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿಗಳಾದ ಶಂಕರ ಮಾರೀಹಾಳ, ರಾಮನಗೌಡ ಹಟ್ಟಿ, ಡಿವೈಎಸ್ಪಿ ಬಸವರಾಜ ಯಲಿಗಾರ, ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಹಾಗೂ ಇತರೆ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ಬಂಧಿಸಲು ಈ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದ ಎಸ್ಪಿ ಲಕ್ಷ್ಮಣ ನಿಂಬರಗಿ ಬಾಗಪ್ಪನ ಕೊಲೆಗೈದವರನ್ನು ನಗರದ ಇಟಗಿ ಪಂಪ್ ಬಳಿ ವಶಕ್ಕೆ ಪಡೆದರು.
ಕೊಲೆ ರಹಸ್ಯ ಬಾಯಿಬಿಟ್ಟ ಹಂತಕರು
ನಾಲ್ವರು ಕೊಲೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಳಿಕ ವಿಚಾರಣೆ ನಡೆಸಿದ ಪೊಲೀಸರು, ವಕೀಲ ರವಿ ಮೇಲಿನಕೇರಿ ಕೊಲೆ ನಂತರ ನನಗೆ ಬಾಗಪ್ಪ ಕಿರುಕುಳ ನೀಡುತ್ತಿದ್ದನು. ರವಿ ಗಳಿಸಿರುವ ಆಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದನು. ಇಲ್ಲವೇ 10 ಕೋಟಿ ಹಣ ನೀಡು, ಅದೂ ಇಲ್ಲದಿದ್ದರೆ ರವಿ ಪತ್ನಿಯನ್ನು ಕಳುಹಿಸು ಅಂತ ಬಾಗಪ್ಪ ಹರಿಜನ ಕಿರುಕುಳ ನೀಡುತ್ತಿದ್ದನು. ಹೀಗಾಗಿ ನಾವು ಆತನನ್ನು ಹತ್ಯೆ ಮಾಡಿದ್ದೇವೆ ಎಂದು ಪಿಂಟ್ಯಾ ಮತ್ತು ಇತರೆ ಆರೋಪಿಗಳು ಬಾಯಿ ಬಿಟ್ಟಿದಾರೆ. ಸದ್ಯ ವಿಜಯಪುರ 2ನೇ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.