ಉಡುಪಿ : ಉಡುಪಿ ಜಿಲ್ಲೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಮಿನಿ ಟೆಂಪೋ ಬ್ರೇಕ್ ಆಗಿ ಪಲ್ಟಿಯಾದ ಪರಿಣಾಮ ಟೆಂಪೋನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಮುಳ್ಳೂರಲ್ಲಿ ನಡೆದಿದೆ.
ಮೃತನನ್ನು ಮಹಾರಾಷ್ಟ್ರ ಮೂಲದ ಜಿತೇಂದರ್ (38) ಎಂದು ಗುರುತಿಸಲಾಗಿದೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ರಾಜ(37), ಆದಿತ್ಯ (20) ಭದ್ರಾವತಿಯ ಬಾಬು (55), ಶಾಬಾಸ್ (25) ಗಂಭೀರ ಗಾಯಗೊಂಡವರು. ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
ವಾಹನದಲ್ಲಿದ್ದ ಪ್ರಯಾಣಿಕರೆಲ್ಲಾ ಜಾತ್ರಾ ವ್ಯಾಪಾರಿಗಳಾಗಿದ್ದು, ಕಳಸ ಜಾತ್ರೆ ಮುಗಿಸಿ ಮಂದಾರ್ತಿ ಜಾತ್ರೆಗೆ ಪ್ರಯಾಣಿಸುತ್ತಿದ್ದ ವೇಳೆ ಮಾಳ ಮುಳ್ಳೂರು ಘಾಟಿ ಕೆಳಗೆ ಪೆಟ್ರೋಲ್ ಬಂಕ್ ಬಳಿ ಬ್ರೇಕ್ ವೈಫಲ್ಯಕ್ಕೊಳಗಾಗಿ ವಾಹನ ಪಲ್ಟಿಯಾಗಿದೆ. ಅಪಘಾತದ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.