ರಾಯಚೂರು : ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಎನ್ನದೆ ಎಲ್ಲರ ಮೇಲು ನಾಯಿಗಳು ದಾಳಿ ಮಾಡುತ್ತಿವೆ. ಇದೀಗ ರಾಯಚೂರಿನಲ್ಲಿ ಬೀದಿ ನಾಯಿಗಳು ದಾಳಿ ಮಾಡಿದಾಗ ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಯುವತಿ ಒಬ್ಬಳು ಕೋಮಾ ಸ್ಥಿತಿಗೆ ತಲುಪಿರುವ ಘಟನೆ ನಡೆದಿದೆ.
ರಾಯಚೂರಿನ ಬಡ್ಡಿಪೇಟೆಯಲ್ಲಿ ಈ ಒಂದು ಘಟನೆ ನಡೆದಿದ್ದು ಕೋಮಾ ಸ್ಥಿತಿ ತಲುಪಿದೆ ಯುವತಿಯನ್ನು ಮಹಾದೇವಿ (20) ಎಂದು ತಿಳಿದುಬಂದಿದೆ.ಇಂದು ದೇವಾಲಯಕ್ಕೆ ಹೋಗುವ ವೇಳೆ ನಾಯಿಗಳು ದಾಳಿ ಮಾಡಿವೆ. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿದೆ. ಕೆಳಗೆ ಬಿದ್ದ ಯುವತಿಯನ್ನು ನಾಯಿಗಳು ಎಳೆದಾಡಿವೆ. ಯುವತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಳ್ಳಾರಿಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರೆಫರ್ ಮಾಡಿದ್ದಾರೆ. ಆದರೆ ತೀವ್ರ ಬಡತನವಿರುವ ಕಾರಣ ಪುನಃ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು ಎಂದು ಪಾಲಕರು ತಿಳಿಸಿದ್ದಾರೆ. ತನ್ನದಲ್ಲದ ತಪ್ಪಿಗೆ ಬೀದಿ ನಾಯಿಗಳ ದಾಳಿಗೆ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಈಗ ನಗರಸಭೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಪಾಲಕರು ವ್ಯಕ್ತಪಡಿಸಿದ್ದಾರೆ.








