ಬೆಂಗಳೂರು : ತಿರುಪತಿ ತುಪ್ಪ ವಿವಾದದ ಬಳಿಕ ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಂದಿನಿ ತುಪ್ಪ ಹೊರತುಪಡಿಸಿ ಉಳಿದ ತುಪ್ಪಗಳ ಮಾದರಿ ಪರೀಕ್ಷೆ ನಡೆಸುತ್ತಿದ್ದು, ಈವರೆಗೆ 230 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 224 ಮಾದರಿಗಳು ಸುರಕ್ಷಿತವಾಗಿವೆ ಎಂಬುದು ಪರೀಕ್ಷೆಯಲ್ಲಿ ದೃಢವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಿರುಪತಿಯ ಲಡ್ಡುವಿಗೆ ಬಳಸಿರುವ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನಂಶ ಬಳಕೆಯಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ 230 ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಯಾವುದರಲ್ಲೂ ದನದ ಕೊಬ್ಬಿನಂಶ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಲಭ್ಯವಿರುವ ಪಯಾವುದೇ ತುಪ್ಪವು ಸೇವನೆಗೆ ಅಸುರಕ್ಷಿತ ಎಂದು ಪತ್ತೆಯಾಗಿಲ್ಲ. ಅಲ್ಲದೇ ದನದ ಮಾಂಸದ ಕೊಬ್ಬಿನಂಶ ತುಪ್ಪಗಳಲ್ಲಿ ಪತ್ತೆಯಾ ಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.