ವಿಜಯಪುರ : ವಿಜಯಪುರ ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಹೆಸರು ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ವಿಡಿಯೋ ಮುಖಾಂತರ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಖಾಸಗಿ ವ್ಯಕ್ತಿ ಖಾಸಗಿ ಸಂಸ್ಥೆ ಸರ್ಕಾರಿ ಸಂಸ್ಥೆಯವರು ಅವರ ಬಳಿಯ ಸೂಕ್ತ ದಾಖಲಾತಿ ಕಂದಾಯ ಇಲಾಖೆಗೆ ನೀಡಬೇಕು. ಸಂಬಂಧಿಸಿದವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ನಂತರ ಹಕ್ಕನ್ನು ಖಚಿತಪಡಿಸಿಕೊಂಡು ದಾಖಲಾತಿಗಳನ್ನು ಇಂಡೀಕರಣ ಮಾಡಲಾಗುತ್ತದೆ. ಇಂಡೀಕರಣ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದಿದ್ದಾರೆ.
1974 ರಲ್ಲಿ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ಆಸ್ತಿಗಳ ಕಂದಾಯ ಇಲಾಖೆಗೆ ಇಂಡೀಕರಣ ಮಾಡಲು ಪಟ್ಟಿ ನೀಡಿದ್ದಾರೆ. ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳು ನೀಡಿದ್ದಾರೆ. ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.ಈ ಪ್ರಕ್ರಿಯೆಗಾಗಿ ರೈತರಿಗೆ ಹಾಗೂ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಗೆ ಭಯಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಧೈರ್ಯ ತುಂಬಿದ್ದಾರೆ.
ಸೂಕ್ತ ದಾಖಲಾತಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲು ಸಲಹೆ ನೀಡಿದ್ದಾರೆ. ದಾಖಲಾತಿಗಳನ್ನು ಆಧರಿಸಿ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ತಹಸೀಲ್ದಾರ್ ನೋಟಿಸ್ ನೀಡದೆ ಇಂಡೀಕರಣ ಮಾಡಿದರೆ, ರೈತರು ಮಾಲೀಕರು ಎಸಿಗೆ ಹಾಗೂ ನಂತರ ಡಿಸಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ನೋಟಿಸ್ ಬಂದ ತಕ್ಷಣ ಯಾರ ಹಕ್ಕು ತಕ್ಷಣ ಬದಲಾವಣೆಯಾಗುವುದಿಲ್ಲ. ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.