ಮೈಸೂರು : ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರು ಮುಡಾ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. ಮೂರು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ವೇಳೆ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ಕಾನೂನು ಬದ್ಧವಾಗಿಯೇ ಸೈಟ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುವ ಸಂದರ್ಭದಲ್ಲಿ, ಪತ್ರವನ್ನು ವೈಟ್ನರ್ ನಿಂದ ಅಳಿಸಿ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ನನಗೆ ಸರ್ಕಾರದ ರೀತಿ ಪತ್ರ ಬರೆಯಲು ಬರುವುದಿಲ್ಲ. ಏನೋ ತಪ್ಪಾಗಿದೆ ಎಂಬ ಅನಿಸಿದ್ದಕ್ಕೆ ಹಾಗೆ ಮಾಡಿದೆ ಎಂದು ಉತ್ತರಿಸಿದ್ದಾರೆ.
ನೀವು ಹಲವು ಕಡೆ ಹಾಕಿರುವ ಸಹಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಏಕೆ ಎಂಬ ಪ್ರಶ್ನೆಗೆ ನಾನು ಯಾವಾಗಲೂ ಸಹಿ ಹಾಕುವುದಿಲ್ಲ. ಯಾವಾಗಲಾದರೂ ಒಮ್ಮೆ ಸಹಿ ಹಾಕುತ್ತೇನೆ. ಹಾಗಾಗಿ ಸಹಿಯಲ್ಲಿ ವ್ಯತ್ಯಾಸಗಳು ಆಗಿರಬೇಕು ಎಂದು ಪಾರ್ವತಿ ಉತ್ತರಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಯಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ವಿಚಾರಣೆಗೆ ಹಾಜರಾಗಿದ್ದು, ಸುಮಾರು 3 ಗಂಟೆ ಕಾಲ ಹೇಳಿಕೆ ದಾಖಲಿಸಿ ತೆರಳಿರುವ ಬಗ್ಗೆ ಮಾಹಿತಿ ಇದೆ. ಮೈಸೂರು ಲೋಕಾಯುಕ್ತ ಪೊಲೀಸರು ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗಾಗಿ ಪಾರ್ವತಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.