ಬೆಂಗಳೂರು : ಹೊಸ ತಂತ್ರಾಂಶ ಅಳವಡಿಕೆ, ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಪಡಿತರ ಚೀಟಿದಾರರು ಪರದಾಟ ನಡೆಸುತ್ತಿದ್ದಾರೆ.
ಹೌದು, ಸುಗಮವಾಗಿ ಪಡಿತರ ವಿತರಿಸಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿದ ತಂತ್ರಾಂಶದಿಂದಾಗಿ ಪಡಿತರ ಚೀಟಿದಾರರಿಗೆ ಸಂಕಷ್ಟ ಎದುರಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತರೂ 50 ಮಂದಿಗಷ್ಟೇ ಪಡಿತರ ಸಿಗುತ್ತಿದೆ.
ಆಹಾರ ಇಲಾಖೆಯ ಸಾಫ್ಟ್ವೇರ್ ಅನ್ನು 30 ಇಲಾಖೆಗಳು ಬಳಸುತ್ತಿರುವುದರಿಂದ ಸರ್ವರ್ ಡೌನ್ ಸಮಸ್ಯೆ ಹೆಚ್ಚಾಗಿದೆ. ಇದರ ಪರಿಣಾಮ ರಾಜ್ಯಾದ್ಯಂತ ಪಡಿತರ ಚೀಟಿದಾರರು ರೇಷನ್ ಪಡೆಯಲು ಪರದಾಟ ನಡೆಸುವಂತಾಗಿದೆ.
ಆಹಾರ ಇಲಾಖೆ ಹೊಸ ಸಾಫ್ಟ್ ವೇರ್ ಅಳವಡಿಸಲು ಸೆಪ್ಟೆಂಬರ್ ಅಂತ್ಯದಲ್ಲಿ ಕಾರ್ ಆರಂಭವಾಗಿದ್ದರೂ ಅಕ್ಟೋಬರ್ ಬಂದರೂ ಪೂರ್ಣವಾಗಿಲ್ಲ.
ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿದಾರರಿಗೆ ತೊಂದರೆ ಶುರುವಾಗಿದ್ದು, ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರ ಪಡೆಯಲು ನೂರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಇದೆ. ಪ್ರತಿ ತಿಂಗಳು 10, 12ನೇ ತಾರೀಖಿನೊಳಗೆ ಆಹಾರ ಧಾನ್ಯ ಹಂಚಿಕೆ ಪೂರ್ಣವಾಗುತ್ತಿತ್ತು. ಈಗ ಅಕ್ಟೋಬರ್ 17ರಿಂದ ಆಹಾರಧಾನ್ಯ ವಿತರಣೆ ವಿಳಂಬವಾಗಿ ಸಾಗಿದ್ದು, ಸರ್ವರ್ ಸಮಸ್ಯೆಯೂ ಸೇರಿ ಪಡಿತರ ಚೀಟಿದಾರರು ಪರದಾಡುವಂತಾಗಿದೆ.