ಬೆಂಗಳೂರು : ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸ್ಪೋಟಕ ಅಂಶ ಬಯಲಾಗಿದ್ದು, ಈ ಒಂದು ತರಕಾರಿಗಳಲ್ಲಿ ಲೋಹದ ಅಂಶ ಹಾಗೂ ವಿಷದ ಅಂಶಗಳು ಪತ್ತೆಯಾಗಿವೆ. ಈ ಹಿನ್ನೆಯಲ್ಲಿ ಸಮಗ್ರ ಅಧ್ಯಯನಕ್ಕೆ ಉನ್ನತ ಮಟ್ಟದ ಸಮೀತಿ ರಚನೆ ಮಾಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board-CPCB) ಸೂಚನೆ ನೀಡಿದೆ.
ಹೌದು ಹೆವಿ ಮೆಟಲ್ಸ್ ಮತ್ತು ಕೀಟನಾಶಕಗಳ ಮಾದರಿಗಳ ಬಗ್ಗೆ ಎಫ್ಎಸ್ಎಸ್ಎಐ-ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರ ಅಧ್ಯಯನ ಕೈಗೊಳ್ಳಬೇಕು. ತರಕಾರಿಗಳಲ್ಲಿನ ಅವಶೇಷಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನ ಪ್ರಕಾರ, ಎಫ್ಎಸ್ಎಸ್ಎಐ ಸೂಚಿಸಿದ ಮಾನದಂಡಗಳೊಂದಿಗೆ ಮಾತ್ರ ಹೋಲಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಬೆಂಗಳೂರಿನ ತರಕಾರಿಗಳ ಸುಮಾರು 400 ಮಾದರಿಗಳ ಅಧ್ಯಯನ ನಡೆಸಿದ್ದ ಇಎಂಪಿಆರ್ಐ, ತರಕಾರಿಗಳಲ್ಲಿ ಕಬ್ಬಿಣ, ಕ್ಯಾಡ್ಮಿಯಮ್, ಸೀಸ ಮತ್ತು ನಿಕಲ್ ಅಂಶಗಳು ಆಹಾರ ಮತ್ತು ಕೃಷಿ ಸಂಸ್ಥೆಯು ಸೂಚಿಸಿದ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿತ್ತು. ಪರಿಸರ ನಿರ್ವಹಣಾ ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ) ನಡೆಸಿದ ಅಧ್ಯಯನದಲ್ಲಿ ತರಕಾರಿಗಳಲ್ಲಿ ಲೋಹದ ಅಂಶ ಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ವಿವರಗಳನ್ನು ಕೋರಿತ್ತು. ಅದರ ಬೆನ್ನಲ್ಲೇ ಇದೀಗ ಉನ್ನತ ಮಟ್ಟದ ಸಮಿತಿ ರಚನೆ ಬಗ್ಗೆ ಪ್ರಸ್ತಾಪಿಸಲಾಗಿದೆ.