ಬೆಂಗಳೂರು :ಬೆಂಗಳೂರಲ್ಲಿ ಘೋರ ದುರಂತವೊಂದು ನಡೆದಿದ್ದು, ಆನೆಯ ಮೇಲೆ ಕುಳಿತು ಮೈತೊಳೆಯುವ ಸಂದರ್ಭದಲ್ಲಿ ಏಕಾಏಕಿ ಆನೆ ಆಳದ ನೀರಿನೊಳಗೆ ಇಳಿದ ಕಾರಣ ಮೇಲೆ ಕುಳಿತಿದ್ದ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಮಾರ್ಗದ ಸೀಗೆಕಟ್ಟೆ ಕೆರೆಯಲ್ಲಿ ನಡೆದಿದೆ.
ಜೇನುಕುರುಬ ಸಮುದಾಯಕ್ಕೆ ಸೇರಿದ ಮೈಸೂರು ಜಿಲ್ಲೆಯ ಹುಣ ಸೂರು ಮೂಲದ ಗೋಪಾಲ್ (20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು 2 ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.
ನಿನ್ನೆ ಬೆಳಗ್ಗೆ ಈ ಒಂದು ಘಟನೆ ನಡೆದಿದ್ದು, 10 ಗಂಟೆಗೆ ಆನೆ ಮೈತೊಳೆಯುವ ಸಮಯದಲ್ಲಿ ಆನೆ ಗಾಬರಿಗೊಂಡಿದೆ ಈ ವೇಳೆ ಕೆರೆಯ ಒಳಭಾಗಕ್ಕೆ ಇಳಿದಿದೆ. ಈ ವೇಳೆ ಈಜು ಬಾರದ ಗೋಪಾಲ್ ಆಳದ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಅಣ್ಣ ಕೃಷ್ಣಕುಮಾರ್, ಮಾವುತ ಸಂಜೇಶ್ ರಕ್ಷಿಸಲು ಹರಸಾಹಸಪಟ್ಟರೂ ಕ್ಷಣಮಾತ್ರದಲ್ಲಿ ಗೋಪಾಲ್ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯಪಾಲಕ ನಿರ್ದೇಶಕ ವಿಶಾಲ್ ಸೂರ್ಯಸೇನ್ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮುಳುಗು ತಜ್ಞರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ 3 ಘಂಟೆ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ರವಾನಿಸಿದರು.