ವಿಜಯಪುರ : ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮೇಲೆ ವಿಜಯಪುರದ ಆರೋಪಿಗಳು ಹೊರ ಬಂದಿದ್ದಾರೆ.ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ, ಸಿಂದಗಿ ಪಟ್ಟಣದ ಬಸವನಗರ ವಾಸಿ ಪರಶುರಾಮ್ ವಾಗ್ಮೋರೆ ಇಂದು ಬಿಡುಗಡೆಯಾದರು.ಇಬ್ಬರು ಆರೋಪಿತರನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಹಾಗೂ ಶ್ರೀರಾಮ ಸೇನೆಯ ಮುಖಂಡರು ಪದಾಧಿಕಾರಿಗಳು ಸ್ವಾಗತ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಈ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಬಿಡುಗಡೆಯಾಗಿದ್ದಾರೆ.ಗೌರಿ ಹತ್ಯೆ ಬಳಿಕ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿತರಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಿದ್ದು ಇನ್ನೂ 7 ಜನ ಆರೋಪಿತರಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ.
ಗೌರಿ ಹತ್ಯೆಯ ಇಬ್ಬರು ಆರೋಪಿತರನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಹಾಗೂ ಶ್ರೀರಾಮ ಸೇನೆಯ ಮುಖಂಡರು ಪದಾಧಿಕಾರಿಗಳು ಸ್ವಾಗತ ಮಾಡಿದ್ದಾರೆ. ನಗರದ ಕಾಳಿಕಾ ಮಂದಿರದಲ್ಲಿ ಇಬ್ಬರೂ ಆರೋಪಿತರು ಪೂಜೆ ಮಾಡಿ ಪ್ರಾರ್ಥಣೆ ಸಲ್ಲಿಸಿದ್ದಾರೆ. ಬಳಿಕ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಬಳಿಕ ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಹಾರ ಹಾಕಿದರು.