ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಸತೀಶ್ ಜಾರಕಿಹೊಳಿ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ.ಕಳೆದ ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಬಳಿಕ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಇದರ ಮಧ್ಯ ಪ್ರತಿಯೊಬ್ಬರಿಗೂ ಸಚಿವ, ಡಿಸಿಎಂ, ಸಿಎಂ ಅನಂತರ ಕೇಂದ್ರ ಸಚಿವ ರಾಗಲು ಎಲ್ಲರಿಗೂ ಆಸೆ ಇರುತ್ತದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಮೊದಲು ಸಚಿವ, ಅಮೇಲೆ ಡಿಸಿಎಂ, ಬಳಿಕ ಸಿಎಂ, ಅನಂತರ ಕೇಂದ್ರ ಸಚಿವರಾಗಬೇಕು ಅಂತಾ ಆಸೆ ಇರುತ್ತದೆ. ಆದರೆ ಸದ್ಯಕ್ಕೆ ಸಿಎಂ ರೇಸ್ ಸನ್ನಿವೇಶ ಇಲ್ಲ. ಮುಡಾ ತನಿಖೆ ಆಗಬೇಕು. ಪಾರ್ಟಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರೊಬ್ಬರ ವೈಯುಕ್ತಿಕ ತೀರ್ಮಾನ ಅಲ್ಲ. ಯಾರೂ ಕಿಂಗ್ ಮೇಕರ್ ಆಗಲು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಈಗ ರಾಜೀನಾಮೆ ಪ್ರಶ್ನೆ ಇಲ್ಲ ಎಂದರು.
ನಮ್ಮ ಪಕ್ಷದ ಪರವಾಗಿ ನಾವು ನಿಂತಿದ್ದೇವೆ. ಪಕ್ಷಕ್ಕೆ ಪ್ರತಿ ದಿನ 12 ಗಂಟೆ ಸಮಯ ನೀಡುತ್ತಿದ್ದೇವೆ. ಕೆಲವರು ತೆರೆಮರೆಯಲ್ಲಿ ಪಕ್ಷಕ್ಕೆ ದುಡಿಯುತ್ತಿರುತ್ತಾರೆ. ಕೆಲವರು ಹೈಲೈಟ್ ಆಗುತ್ತಾರೆ, ಕೆಲವರು ಹೈಲೈಟ್ ಆಗೋದಿಲ್ಲ. ಸಿದ್ದರಾಮಯ್ಯ ಮುಂದೆಯೂ ಸಿಎಂ ಆಗಿಯೇ ಇರುತ್ತಾರೆ. ಪಕ್ಷದಲ್ಲಿ ಯಾವ ಮುಸುಕಿನ ಗುದ್ದಾಟವೂ ಇಲ್ಲ. ಸರ್ಕಾರ ಆರಂಭಗೊಂಡ ದಿನದಿಂದ ಬಿಜೆಪಿಯವರು ಸರ್ಕಾರ ಬೀಳುತ್ತದೆ ಎನ್ನುತ್ತಿದ್ದಾರೆ. ಇದೆಲ್ಲ ರಾಜಕೀಯದಲ್ಲಿ ಸ್ವಾಭಾವಿಕ ಎಂದು ಹೇಳಿದರು.