ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ಹೊರಗುತ್ತಿಗೆ ನೌಕರರನ್ನು ಸಹಕಾರ ಸಂಘದ ಮೂಲಕ ನೇಮಕ ಮಾಡಿಕೊಳ್ಳುವಂತೆ ಆದೇಶಿಸಲಾಗಿತ್ತು. ಈಗ ಹೊರಗುತ್ತಿಗೆ ನೌಕರರನ್ನು ಸಹಕಾರ ಸಂಘದ ಮೂಲಕ ನೇಮಕಾತಿ ಸಂಬಂಧ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಈ ಕುರಿತಂತೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನದ ಪೀಠಾಧಿಕಾರಿಗಳು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 7 ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ: CMW:69:CLM: 2001, ದಿನಾಂಕ: 21/11/2001 ರಲ್ಲಿ ಪುದತ್ತವಾದ ಅಧಿಕಾರ ಚಲಾಯಿಸಿ, ಎಂ.ಡಿ. ಮಠಪತಿ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ಗುಲಬರ್ಗಾ ಪ್ರಾಂತ್, ರಾಯಚೂರು ಇವರು ಬೀದರ್ ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ (ನಿ) ಬೀದರ್ ಇದನ್ನು ನೋಂದಣಿ ಮಾಡಿದ್ದು, ನೋಂದಣಿ ಸಂಖ್ಯೆ: ಸಂನಿರಾ:ವಿ-1:ಎಓಟಿ:346991/2007-08, ದಿನಾಂಕ: 16.01.2008 ರಂದು ಸಂಘಕ್ಕೆ ದಾಖಲು ಮಾಡಲು ಆದೇಶಿಸಲಾಗಿರುತ್ತದೆ ಎಂದಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅವುಗಳ ಅಧೀನದಲ್ಲಿ ಬರುವ ನಿಗಮ/ಮಂಡಳಿಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸುತ್ತಿರುವ ಏಜೆನ್ಸಿಗಳಿಂದ ತೊಂದರೆಯಾಗುತ್ತಿರುವುದು ಅಂದರೆ ನಿಗದಿತ ಕನಿಷ್ಠ ವೇತನ ಪಾವತಿಸದೇ ಇರುವುದು, ಇಎಸ್ಐ/ಪಿಎಫ್ ಸಂದಾಯ ಮಾಡದಿರುವುದು ಹಾಗೂ ಸಕಾಲದಲ್ಲಿ ವೇತನ ನೀಡದೇ ಇರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಶೀಲಿಸಲಾಗಿ ಉಲ್ಲೇಖ (1)ರಂತೆ ಬೀದರ್ ಜಿಲ್ಲೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳನ್ನು ಒದಗಿಸುವ ಹಾಗೂ ಉತ್ತಮ ಸೇವೆ ಒದಗಿಸುವ “ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘ (ನಿ) ಬೀದರ್ ಸೊಸೈಟಿ”ಯು ಅಸ್ತಿತ್ವದಲ್ಲಿದ್ದು, ಈ ಸೊಸೈಟಿಯು ಸಹಕಾರ ಸಂಘಗಳ ಕಾಯ್ದೆ, 1959 ಕಲಂ 7ರ ಪ್ರಕಾರ ನೋಂದಣಿಯಾಗಿದ್ದು, 2001 ರಿಂದ ಕಾರ್ಯನಿರ್ವಹಿಸುತ್ತಿದೆ. ಸದರಿ ಸೊಸೈಟಿಯ ಉದ್ದೇಶ, ಹಣಕಾಸಿನ ಮೂಲ ಇತ್ಯಾದಿ ವಿವರಗಳು ಈ ಕೆಳಕಂಡಂತಿರುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಘದ ಪಾಥಮಿಕ ಉದ್ದೇಶಗಳು
> ಗುತ್ತಿಗೆದಾರರಿಂದ ನೌಕರರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವುದು ಹಾಗೂ ಗುತ್ತಿಗೆದಾರಿಕೆಯನ್ನು ಸಂಘವೇ ವಹಿಸಿಕೊಳ್ಳುವುದು.
> ಕೌಶಲ್ಯವನ್ನು ಅಭಿವೃದ್ಧಿಗೊಳಿಸುವುದು
> ಭವಿಷ್ಯನಿಧಿ ಮತ್ತು ಇ.ಎಸ್.ಐ ಸಂದಾಯವನ್ನು ನಿಯಮಾನುಸಾರ ಸಮರ್ಪಕವಾಗಿ ನಿರ್ವಹಿಸುವುದು.
> ಸಾಮಾಜಿಕ ಭದ್ರತೆಗಾಗಿ ಉಳಿತಾಯ ಮತ್ತು ಸಾಲದ ಸೌಲಭ್ಯ ಕಲ್ಪಿಸುವುದು
> ಈ ವ್ಯವಸ್ಥೆ ಮೂಲಕ ಕಾರ್ಮಿಕರನ್ನು ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿ ಉತ್ತಮ ಕೂಲಿ, ಕೆಲಸದ ನಿರಂತರತೆ, ಉತ್ತಮ ಸೇವೆಗಳಿಂದ ಸಾಮಾಜಿಕ ಭದ್ರತೆಯನ್ನು ಒದಗಿಸುವುದು
> ಮೈಕ್ರೋವಿಮೆ, ಮೈಕ್ರೋ ಸಾಲಗಳ ಮೂಲಕ ಉಳಿತಾಯ ಮತ್ತು ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೇವೆಗಳನ್ನು ಒದಗಿಸುವುದು.
> ಸಾಲ ಸೌಲಭ್ಯ ಒದಗಿಸುವುದು.
ಈ ಸಂಘವು ಮನೆಗೆಲಸ, ಕೈತೋಟ, ಸ್ವಚ್ಛತೆ ಕೆಲಸ, ಹೋಟೆಲ್ ಸೇವೆ, ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ಕಾರ್ಮಿಕರನ್ನು ಒದಗಿಸುವುದು, ಹಮಾಲಿ ಕೆಲಸ, ಸರ್ಕಾರಿ ಹಾಗೂ ಅರ ಸರಕಾರಿ ಸಂಸ್ಥೆಗಳಲ್ಲಿ ಕೌಶಲ್ಯ ಮತ್ತು ಕೌಶಲ್ಯ ರಹಿತ ಸೇವೆ ಒದಗಿಸುವುದು, ಭದ್ರತಾ ಸೇವೆ, ವಾಹನ ಚಾಲನೆ ಹಾಗೂ ಮನೆಯ ಸೇವೆಗಳು ಇತ್ಯಾದಿ ಕೆಲಸಗಳಿಗೆ ಸಂಬಂಧಿಸಿದಂತೆ ಸೇವೆಯನ್ನು ಒದಗಿಸುತ್ತಿದೆ.
ಈ ಸಂಘದ ಹಣಕಾಸಿನ ಮೂಲಗಳು
>ಷೇರು ಫೀ ಮತ್ತು ಪ್ರವೇಶ ಫೀ ಪಡೆಯುವುದರಿಂದ
>ಠೇವಣಿಗಳನ್ನು ಸ್ವೀಕರಿಸುವುದರಿಂದ
>ಗುತ್ತಿಗೆಗಳ ಮೇಲೆ ಸೇವಾ ಶುಲ್ಕ ಸ್ವೀಕರಿಸುವುದರಿಂದ
>ಸಾಲ ಪಡೆಯುವುದರಿಂದ
>ಸಾಲ ಕೊಡುವುದರ ಮೂಲಕ
ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ (ನಿ), ಆಡಳಿತ ಮಂಡಳಿ/ಸದಸ್ಯರುಗಳ ವಿವರ
- ಅಧ್ಯಕ್ಷರು, ಜಿಲ್ಲಾಧಿಕಾರಿಗಳು
- ಕಾರ್ಯದರ್ಶಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
- ನಿರ್ದೇಶಕರು, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು, ಜಿ.ಬಾ.ಕಾ.ವು.ಸಂ
- ನಿರ್ದೇಶಕರು, ಯೋಜನಾ ಅಧಿಕಾರಿಗಳು, ಜಿ.ಬಾ.ಕಾ.ವು.ಸಂ,
- ನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕರು
- ನಿರ್ದೇಶಕರು, ಸದಸ್ಯರಿಂದ ಚುನಾಯಿತರು
- ನಿರ್ದೇಶಕರು, ಸದಸ್ಯರಿಂದ ಚುನಾಯಿತರು
- ನಿರ್ದೇಶಕರು, ಸದಸ್ಯರಿಂದ ಚುನಾಯಿತರು
- ನಿರ್ದೇಶಕರು, ಸದಸ್ಯರಿಂದ ಚುನಾಯಿತರು
- ನಿರ್ದೇಶಕರು, ಸದಸ್ಯರಿಂದ ಚುನಾಯಿತರು
- ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು
ಈ ಸೊಸೈಟಿಯಲ್ಲಿ ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ & ಭದ್ರತಾ ಸಿಬ್ಬಂದಿ, ಗ್ರೂಪ್ ‘ಡಿ’, Technical ಇತ್ಯಾದಿಗಳಿಗೆ ಇಲಾಖೆ, ಬೋರ್ಡ್, ಕಾಪೋರೇಷನ್ ಇತ್ಯಾದಿ ಸಂಸ್ಥೆಗಳು ಯಾವ ಯಾವ ಹುದ್ದೆಯ ಕಾರ್ಮಿಕರು ಬೇಕೆಂಬ ಬಗ್ಗೆ ಬೇಡಿಕೆ ಸಲ್ಲಿಸಿದಾಗ, ಅಂತಹ ನೌಕರರುಗಳ ಸೇವೆಯನ್ನು ನೀಡಲಾಗುತ್ತದೆ ಹಾಗೂ ಸದರಿ ಸೇವೆಗೆ ಸಂಸ್ಥೆಗಳಿಂದ ವೇತನ ಹಾಗೂ ಇತರೆ ಭತ್ಯೆಗಳ ಮೊತ್ತವನ್ನು ಸ್ವೀಕರಿಸಿ ಸೊಸೈಟಿ ವತಿಯಿಂದ ನೇರವಾಗಿ ವೇತನವನ್ನು ನೌಕರರ ಖಾತೆಗೆ ಸಂದಾಯ ಮಾಡಲಾಗುತ್ತಿದೆ ಹಾಗೂ ಇಎಸ್ಐ, ಪಿಎಫ್, ಜಿಎಸ್ಟಿ ಇತ್ಯಾದಿಗಳೆಲ್ಲವನ್ನು ಆ ಸೊಸೈಟಿ ವತಿಯಿಂದಲೇ ನೇರವಾಗಿ ಸಂಬಂಧಿಸಿದ ಇಲಾಖೆಗಳಿಗೆ ಸಂದಾಯ ಮಾಡಲಾಗುತ್ತಿದ್ದು, ಸೊಸೈಟಿ ಒದಗಿಸುವ ಈ ರೀತಿಯ ಸೇವೆಗೆ ಪ್ರಸ್ತುತ 1% ಸೇವಾ ಶುಲ್ಕವನ್ನು ಪಡೆಯಲಾಗುತ್ತಿದೆ.
ಸೇವಾ ಶುಲ್ಕ ಹಾಗೂ ಇತರೆ ಮೂಲಗಳಿಂದ ಸಂಗ್ರಹವಾಗುವ ಮೊತ್ತದಿಂದ ಸೊಸೈಟಿಯ ಸದಸ್ಯರಾದ ಎಲ್ಲಾ ಕಾರ್ಮಿಕರಿಗೆ ಸಾಲ ಸೌಲಭ್ಯ ಹಾಗೂ ಇತರ ಕೆಲವೊಂದು ಯೋಜನೆಗಳನ್ನು (Scheme) ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಈ ಸೊಸೈಟಿಯಲ್ಲಿ ಸದಸ್ಯತ್ವ ಹೊಂದಿದಂತಹ ನೌಕರರು ಒಂದು ವೇಳೆ ಮೃತಪಟ್ಟಲ್ಲಿ ರೂ. 50,000/- ಗಳ ಸಹಾಯಧನ, ಕಾರ್ಮಿಕರಿಗೆ ವೇತನ ಚೀಟಿ ನೀಡಿದರೆ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಸಹ ಇರುತ್ತದೆ. ಈ ರೀತಿ ಸೊಸೈಟಿಯಲ್ಲಿ ಸದಸ್ಯತ್ವ ಪಡೆದು ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ಹೊರಗುತ್ತಿಗೆ ನೌಕರರಿಗೆ ನಿಗದಿತ ವೇತನ ಹಾಗೂ ನಿಯಮಾನುಸಾರ ಇಎಸ್ಐ/ಪಿಎಫ್ ವಂತಿಕೆ ಜಮೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ.
ಆದ್ದರಿಂದ, ಬೀದರ್ ಜಿಲ್ಲೆಯಲ್ಲಿ ಸ್ಥಾಪಿಸಿರುವಂತೆಯೇ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇದೇ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸಿದಲ್ಲಿ ಹೊರಗುತ್ತಿಗೆ ಮೂಲಕ ನೇಮಕಗೊಳ್ಳುವ ನೌಕರರಿಗೆ ಅನುಕೂಲವಾಗುತ್ತದೆ. ಇದೊಂದು ಅಧಿಕಾರಿಗಳು ಹಾಗೂ ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ಸಹಕಾರ ಸಂಘವಾಗಿದ್ದು, ಕಾರ್ಮಿಕರಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಕಾರ್ಮಿಕರಿಗೆ ನೀಡಲಾಗುವ ಕಿರುಕುಳದಿಂದ ಪಾರು ಮಾಡಬಹುದಾಗಿರುತ್ತದೆ. ದುಡಿಯಲು ಅರ್ಹತೆ ಇರುವ ಕಾರ್ಮಿಕರು ಈ ಸೊಸೈಟಿಯಲ್ಲಿ ಸದಸ್ಯತ್ವ ಪಡೆದು, ನೋಂದಣಿ ಮಾಡಿಸಿಕೊಂಡಲ್ಲಿ ರೂಟೇಷನ್ ಬೇಸಿಸ್ ಮೇಲೆ ಎಲ್ಲರಿಗೂ ಕೆಲಸ ದೊರಕಿಸಿಕೊಡುವ ವ್ಯವಸ್ಥೆ ಕಲ್ಪಿಸಬಹುದಾಗಿರುತ್ತದೆ ಎಂದು ತಿಳಿಸಲಾಗಿರುತ್ತದೆ.
ಮುಂದುವರೆದು, ದಿನಾಂಕ: 18.09.2024ರ ಪತ್ರದಲ್ಲಿ ಪ್ರಾಯೋಗಿಕವಾಗಿ ಮೈಸೂರು, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿಯನ್ನು ಪ್ರಾರಂಭಿಸಬಹುದಾಗಿರುತ್ತದೆ ಹಾಗೂ ಸದರಿ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬಹುದಾಗಿರುತ್ತದೆ ಎಂದು ತಿಳಿಸುತ್ತಾ, ಈಗಾಗಲೇ ಸಿದ್ಧಪಡಿಸಿರುವ ಮಾದರಿ ಕರಡು ಬೈಲಾದನ್ವಯ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಬೈಲಾ ಸಿದ್ಧಪಡಿಸಿ ಸದರಿ ಸೊಸೈಟಿಯನ್ನು ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 7ರ ಪ್ರಕಾರ ನೋಂದಾಯಿಸಲು ಕ್ರಮವಹಿಸುವಂತೆ ಹಾಗೂ ಸದರಿ ಸೊಸೈಟಿ ಸ್ಥಾಪನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ (ನಿ) ಬೀದರ್ ಸೊಸೈಟಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ತಂಡವು ಭೇಟಿ ನೀಡಿ ಅಧ್ಯಯನ ನಡೆಸಿ, ಸೂಕ್ತ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ ಎಂದು ತಿಳಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಅದರಂತೆ, ಸದರಿ ಪುಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಈ ಕೆಳಕಂಡಂತೆ ಆದೇಶಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ನೌಕರರನ್ನು ನಿಯೋಜಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಹಾಗೂ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 7 ರನ್ವಯ ನೋಂದಣಿಯಾಗಿರುವ ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘ ನಿಯಮಿತವು ಅಸ್ತಿತ್ವದಲ್ಲಿದ್ದು, ಸದರಿ ಸಂಘದ ಮಾದರಿಯಲ್ಲಿ ಪ್ರಸ್ತುತ ಮೈಸೂರು, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಒದಗಿಸುವ ಸಂಬಂಧ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧಪಡಿಸಿರುವ ಮಾದರಿ ಕರಡು ಬೈಲಾದನ್ವಯ ಪ್ರಾಯೋಗಿಕವಾಗಿ ಸೊಸೈಟಿ ಪ್ರಾರಂಭಿಸಲು ಹಾಗೂ 4(ಜಿ) ವಿನಾಯಿತಿಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಷರತ್ತಿಗೊಳಪಟ್ಟು ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 7 ರನ್ವಯ ನೋಂದಾಯಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ : ಆಇ 74 ವೆಚ್ಚ-9/2024, ದಿನಾಂಕ : 07/09/2024ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.
‘ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ’ದಲ್ಲಿ ‘ದಸರಾ ವೈಭವ’ಕ್ಕೆ ಸಚಿವ ಮಧುಬಂಗಾರಪ್ಪ ಚಾಲನೆ
BREAKING: ಬೆಂಗಳೂರಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದ ಐವರು ದುಷ್ಕರ್ಮಿಗಳು ಅರೆಷ್ಟ್