ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಈಗಾಗಲೇ 5,895 ಗ್ರಂಥಾಲಯಗಳನ್ನು ಸಜ್ಜುಗೊಳಿಸಿದ್ದು, ಇದರೊಂದಿಗೆ ಈ ವರ್ಷ 263.96 ಕೋಟಿ ರೂ. ಅನುದಾನದಲ್ಲಿ ರಾಜ್ಯದಲ್ಲಿ 6599 ಹೊಸ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ರವರ ಜನ್ಮದಿನದಂದು ರಾಷ್ಟ್ರಮಟ್ಟದಲ್ಲಿ ಗ್ರಂಥಪಾಲಕರ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಏರ್ಪಡಿಸಿರುವ ಗ್ರಂಥಪಾಲಕರ ದಿನಾಚರಣೆಯಲ್ಲಿ ಹೊಸ ಗ್ರಾಮ ಗ್ರಂಥಾಲಯಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಅರಿವು ಕೇಂದ್ರಗಳ ಮಾದರಿ ಕಟ್ಟಡ ವಿನ್ಯಾಸವನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯಿಂದ ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾಗುತ್ತಿರುವ 6599 ಗ್ರಾಮೀಣ ಗ್ರಂಥಾಲಯಗಳಿಗೆ ತಲಾ 2 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ 131.98 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಗ್ರಂಥಾಲಯಕ್ಕೆ ಪೀಠೋಪಕರಣಗಳು ಹಾಗೂ ಡಿಜಿಟಲ್ ಪರಿಕರಗಳನ್ನು ನಿಯಮಾನುಸಾರ ಖರೀದಿಸಿ ಪೂರೈಸಲಾಗುವುದು. 6599 ಹೊಸ ಗ್ರಾಮ ಗ್ರಂಥಾಲಯಗಳಿಗೆ ಮಕ್ಕಳ ಪುಸ್ತಕಗಳನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ಕೊಡುಗೆಯಾಗಿ ನೀಡುತ್ತಿದೆ.
ಗ್ರಾಮೀಣ ಗ್ರಂಥಾಲಯಗಳನ್ನು 2019 ರಲ್ಲಿ ಶಿಕ್ಷಣ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸಲಾಗಿರುತ್ತದೆ. ಪ್ರಸ್ತುತ, ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಅರಿವು ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.
‘ಅರಿವು ಕೇಂದ್ರ’ಗಳಲ್ಲಿ ಸಮುದಾಯದ ಪ್ರತಿಯೊಬ್ಬರನ್ನು ಒಳಗೊಳಿಸಲಾಗಿದ್ದು, ಮಕ್ಕಳ ಬೌದ್ಧಿಕ ಬೆಳವಣಿಗೆ, ಸಾಕ್ಷರತೆಯ ಸಾಕಾರ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮ, ಶಾಲೆ ಬಿಟ್ಟ ವಯಸ್ಕರಿಗೂ ಶಿಕ್ಷಣದ ಅರಿವು, ವಿಶೇಷ ಚೇತನರ ಶೈಕ್ಷಣಿಕ ಅಭ್ಯುದಯ, ಹಿರಿಯ ನಾಗರಿಕರಿಗೆ ಜೀವನಸಂಜೆಯಲ್ಲಿ ಓದು, ಮನರಂಜನೀಯ ಚಟುವಟಿಕೆಗಳು, ಮಕ್ಕಳಿಗೆ ಬೌದ್ಧಿಕ ಹಾಗೂ ದೈಹಿಕ ಆಟಗಳ ಆಯೋಜನೆ ಮುಂತಾದ ಚಟುವಟಿಕೆಗಳಿಗಾಗಿ ಇಲಾಖೆಗೆ ಯಾವುದೇ ಹಣಕಾಸಿನ ಹೊರೆಯುಂಟಾಗದಂತೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಡಿಜಿಟಲ್ ಗ್ರಂಥಾಲಯ
5,895 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಪೈಕಿ 5,691 ಗ್ರಂಥಾಲಯಗಳಿಗೆ ತಲಾ 2 ಗಣಕಯಂತ್ರಗಳು ಹಾಗೂ ಪೂರಕ ಸಾಧನಗಳನ್ನು ಒದಗಿಸಿ, ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಡಿಜಿಟಲೀಕರಣಗೊಳಿಸಲಾಗಿದೆ. ವಿಶೇಷ ಚೇತನರಿಗೆ ಅನುಕೂಲ ಮಾಡಿಕೊಡಲು ರಾಜ್ಯಾದ್ಯಂತ 814 ಬೀಕನ್ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ.
BIG NEWS: ರಾಜ್ಯದ ಗ್ರಾಮ ಪಂಚಾಯ್ತಿ ‘ಗ್ರಂಥಾಲಯ ಮೇಲ್ವಿಚಾರಕ’ರಿಗೆ ಸಿಹಿಸುದ್ದಿ: ‘ಕನಿಷ್ಠ ವೇತನ’ ನಿಗದಿ
ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್: ‘ಸೆಪ್ಟೆಂಬರ್’ನಿಂದ ‘ಲ್ಯಾಂಡ್ ಬೀಟ್ ಆ್ಯಪ್’ ಆಧರಿಸಿ ತೆರವು ಆರಂಭ