ಬೆಂಗಳೂರು: ನಿನ್ನೆ ನಾನು ಕೋರ್ಟ್ ಹಾಲ್ ಬಿಟ್ಟು ಹೋಗೋದಿಲ್ಲ. ನನಗೆ ಬೆದರಿಕೆ ಇದೆ. ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂಬುದಾಗಿ ಹೈಕೋರ್ಟ್ ನ್ಯಾಯಮೂರ್ತಿ ಮುಂದೆ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅಲವತ್ತುಕೊಂಡಿದ್ದರು. ಇಂದು ವಿಚಾರಣ ನಡೆಸಿದಂತ ನ್ಯಾಯಪೀಠದ ಮುಂದೆ ಎಎಸ್ ಪಿಪಿ ಅವರು ಅವರಿಗೆ ಯಾರೂ ಕಿರುಕುಳ ನೀಡಿಲ್ಲ ಎಂಬುದಾಗಿ ವಿವರಣೆ ನೀಡಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಕೆಪಿಟಿಸಿಎಲ್ ನಲ್ಲಿ ಸಹಾಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಶಾಂತಕುಮಾರ ಸ್ವಾಮಿ ಎಂ.ಜಿ ಎನ್ನುವವರು, ನಿನ್ನೆ ಹೈಕೋರ್ಟ್ ನಲ್ಲಿ ಹೈಡ್ರಾಮಾವನ್ನೇ ನಡೆಸಿದ್ದರು. ಸಾಗರ ಡಿವೈಎಸ್ಪಿ ಕಿರುಕುಳ ನೀಡುತ್ತಿದ್ದಾರೆ. ನ್ಯಾಯಾಲಯ ಬಿಟ್ಟು ಹೋಗಲ್ಲ. ನನ್ನನ್ನು ಕಾಪಾಡಿ ಅಂತ ಗೋಗರೆದಿದ್ದರು. ಈ ಘಟನೆಯ ಕುರಿತಂತೆ ಸಮಗ್ರ ಮಾಹಿತಿಯನ್ನು ನ್ಯಾಯಪೀಠದ ಮುಂದೆ ಹಿಡುವಂತೆ ಇಂದಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನೊಳಗೊಂಡ ಪೀಠವು ಸೂಚಿಸಿತ್ತು.
ನ್ಯಾಯಾಲಯದ ಸೂಚನೆಯಂತೆ ಇಂದು ಪ್ರಕರಣದ ವಿಚಾರಣೆ ಆರಂಭಗೊಂಡಾಗ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ಅವರು, ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಏಕ ಸದಸ್ಯ ಪೀಠಕ್ಕೆ ಮಾಹಿತಿ ನೀಡಿತು.
ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅವರು ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿ ಜೊತೆಗೂಡಿ ತಾನು ವಿವಾಹವಾಗಬೇಕಿದ್ದಂತ ಯುವತಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿ ಮತ್ತು ಶಾಂತಕುಮಾರಸ್ವಾಮಿ ನಡುವೆ ನಡೆದಂತ ಸಂಭಾಷಣೆಯ 7-8 ಆಡಿಯೋಗಳಿದ್ದಾವೆ. ಇದಕ್ಕಾಗಿ ಮದುವೆ ಮುರಿದು ಬಿದ್ದಿತ್ತು ಎಂದು ಗಮನಕ್ಕೆ ತಂದರು.
ಇನ್ನೂ ಶಾಂತಕುಮಾರ ಸ್ವಾಮಿ ಆರೋಪಿಸಿದಂತೆ ಪೊಲೀಸರು ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ. ಪೊಲೀಸರು ಸೇರಿದಂತೆ ಯಾರು ಕಿರುಕುಳವನ್ನು ನೀಡಿಲ್ಲ. ಶಾಂತಕುಮಾರ ಸ್ವಾಮಿಯನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ ಹಾಸಿಗೆಯಿಂದ ಕೆಳಗೆ ಉದ್ದೇಶಪೂರ್ವಕವಾಗಿ ಬಿದ್ದು ರಾದ್ಧಾಂತ ನಡೆಸಿದ್ದರು. ಆ ಘಟನೆಯನ್ನು ವೀಡಿಯೋ ಚಿತ್ರೀಕರಸಿಕೊಳ್ಳಲಾಗಿದೆ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠದ ಮುಂದೆ ಎಎಸ್ ಪಿಪಿ ವಿವರಿಸಿದರು.
ಈ ಎಲ್ಲವನ್ನು ಆಲಿಸಿದಂತ ಹೈಕೋರ್ಟ್ ನ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು, ಹೊಸದಾಗಿ ಅರ್ಜಿಯನ್ನು ನಿಮಗೆ ಸಲ್ಲಿಸುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ನೀವು ಅರ್ಜಿ ಸಲ್ಲಿಸಿ. ಆಗ ಪರಿಶೀಲಿಸಿ ಸೂಕ್ತ ಆದೇಶ, ನಿರ್ದೇಶನ ಮಾಡುತ್ತೇವೆ. ನಾವು ಮೌಖಿಕವಾಗಿ ಏನನನ್ನು ಹೇಳುವುದಿಲ್ಲ. ಅದಕ್ಕೆ ಮಾನ್ಯತೆಯೂ ಇರುವುದಿಲ್ಲ ಎಂಬುದಾಗಿ ತಿಳಿಸಿದರು.
ಅಂದಹಾಗೇ ಹೈಕೋರ್ಟ್ ಗೆ ಸಾಗರ ಡಿವೈಎಸ್ಪಿ ತುರ್ತು ಕೆಲಸ ನಿಮಿತ್ತ ತೆರಳಲು ಸಾಧ್ಯವಾಗಿರಲಿಲ್ಲ. ಅವರ ಪರವಾಗಿ ಶಿಕಾರಿಪುರದ ಡಿವೈಎಸ್ಪಿ ತೆರಳಿದ್ದರು. ಶಾಂತಕುಮಾರ ಸ್ವಾಮಿ ಆರೋಪ, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಎಎಸ್ ಪಿಪಿಗೆ ದಾಖಲೆಯ ಸಹಿತ ಒದಗಿಸಿದ್ದರು. ಅಲ್ಲದೇ ಅವರು ಹೈಕೋರ್ಟ್ ನ ಕಲಾಪದ ವೇಳೆಯಲ್ಲಿ ಹಾಜರಿದ್ದರು. ಅವರು ನೀಡಿದಂತ ಮಾಹಿತಿಯನ್ನು ಆಧರಿಸಿ ಹೈಕೋರ್ಟ್ ನ್ಯಾಯಪೀಠಕ್ಕೆ ಎಎಸ್ ಪಿಪಿ ಸಂಪೂರ್ಣ ಮಾಹಿತಿಯನ್ನು ಒದಗಿಸಿ, ವಿವರಣೆ ನೀಡಿದರು. ಹೀಗಾಗಿ ಪ್ರಕರಣದ ಮನವರಿಕೆಯಾದಂತ ನ್ಯಾಯಮೂರ್ತಿಗಳು ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಮತ್ತೆ ಅರ್ಜಿಯನ್ನು ಹೈಕೋರ್ಟ್ ಗೆ ಶಾಂತಕುಮಾರಸ್ವಾಮಿ ಸಲ್ಲಿಸಿದ್ರೇ, ಹೈಕೋರ್ಟ್ ಯಾವ ಸೂಚನೆ, ಆದೇಶ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024