ದಾವಣಗೆರೆ : ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ ಒಂದು ನಡೆದಿದ್ದು, ಕಳೆದ ಕೆಲವು ದಿನಗಳಿಂದ ದಾವಣಗೆರೆ ಜಿಲ್ಲೆಯ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದ್ದು, ತುಂಗಾಭದ್ರಾ ನದಿ ತುಂಬಿ ಹರಿಯುತ್ತಿದೆ. ನದಿ ದಡದಲ್ಲಿರುವ ಗ್ರಾಮವೊಂದರ ಸ್ಮಶಾನವೂ ಜಲಾವೃತಗೊಂಡಿದೆ. ಜನರು ನದಿಯಲ್ಲೇ ಮೃತದೇಹ ಹೊತ್ತು ಸಾಗಿ ಅಂತ್ಯಸಂಸ್ಕಾರ ಮಾಡಿದರು.
ಗುತ್ತೂರು ಗ್ರಾಮದ ಎಚ್.ಎಂ.ಸಿ.ಮಂಜಪ್ಪ (70) ಎಂಬವರು ಗುರುವಾರ ಅಕಾಲಿಕವಾಗಿ ಸಾವನ್ನಪ್ಪಿದ್ದರು. ನದಿ ದಡದಲ್ಲೇ ಸ್ಮಶಾನವಿದೆ. ಆದರೆ ನದಿ ನೀರು ಇಡೀ ಸ್ಮಶಾನವನ್ನು ಆವರಿಸಿಕೊಂಡಿದೆ.ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಶವಸಂಸ್ಕಾರಕ್ಕೂ ಸ್ಥಳವಿಲ್ಲದ ಪರಿಸ್ಥಿತಿ ಇದೆ. ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಗ್ರಾಮದ ಸ್ಮಶಾನ ಜಲಾವೃತವಾಗಿದೆ. ಇದರ ನಡುವೆ, ಗ್ರಾಮಸ್ಥರು ನೀರಿನಲ್ಲೇ ಶವ ಹೊತ್ತು ಸಾಗಿ ಹರಸಾಹಸಪಟ್ಟು ಶವಸಂಸ್ಕಾರ ಮಾಡಿದರು.
ಮಳೆಗಾಲದಲ್ಲಿ ಈ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಸಂಸ್ಕಾರ ಮಾಡುವುದು ಜನರಿಗೆ ದೊಡ್ಡ ತಲೆನೋವು. ಗುರುವಾರ ಜಲಾವೃತವಾದ ಸ್ಮಶಾನದಲ್ಲೇ ತೆರಳಿ ಅಂತ್ಯಸಂಸ್ಕಾರ ಮಾಡುವ ಮೂಲಕ ಗುತ್ತೂರು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.