ಮಂಡ್ಯ :- ಖಾಸಗಿ ಶಾಲೆಗಳಲ್ಲಿ ದೊರಕುವ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣದಂತೆ ಸರ್ಕಾರಿ ಶಾಲೆಗಳ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸಿಎಸ್ಆರ್ ನಿಧಿ ಯೋಜನೆಯಡಿ 10 ಕಂಪ್ಯೂಟರ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ಉಪ ನಿರ್ದೇಶಕ ಎಂ.ಬಿ. ಹರಿದಾಸ್ ತಿಳಿಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ದೊರಕುವ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರದ ಅನುದಾನದ ಜೊತೆಗೆ ಖಾಸಗಿ ಕಂಪನಿಗಳು ಜೊತೆಗೂಡಿಸಿದರೇ ಸರ್ಕಾರಿ ಶಾಲೆಗಳ ಸುಧಾರಣೆಗೆ ನೆರವಾಗುತ್ತದೆ ಎಂದರು.
ಈಗಾಗಲೇ ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ಪ್ರಾರಂಭದಿಂದ ಪ್ರತಿ ವರ್ಷ ಸಿಎಸ್ಆರ್ ನಿಧಿ ಯೋಜನೆಯಡಿ ಅತ್ಯಾಧುನಿಕವುಳ್ಳ ಲೈಬ್ರರಿ, ಬಸ್ ನಿಲ್ದಾಣಗಳು, ಸೋಲಾರ್ ವಿದ್ಯುತ್ ಕಂಬಗಳು, ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಹಾಗೂ ಕೋವಿಡ್ ವೇಳೆ ಆಸ್ಪತ್ರೆಗಳಿಗೆ ಯಂತ್ರೋಪಕರಣಗಳು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲಾ ಕಟ್ಟಡಗಳು ಸುಸಜ್ಜಿತವಾಗಿದ್ದಾಗ ಮಾತ್ರ ಬಡವರು, ಮಧ್ಯಮ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಮಟ್ಟದ ವಿಧ್ಯಾಭ್ಯಾಸ ಮುಂದುವರೆಸಲು ಅನುಕೂಲವಾಗಲಿದೆ ಎಂದು ಪ್ರಧಾನ ವ್ಯವಸ್ಥಾಪಕ ರಮೇಶ್ ಭಂಡಿ ಅಭಿಪ್ರಾಯಪಟ್ಟರು.
ಸಿಎಸ್ಆರ್ ನಿಧಿ ಯೋಜನೆಯಡಿ ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಗಳನ್ನು ನೀಡುವಂತೆ ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ಗೆ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಇಂದು ಗ್ರಾಮೀಣ ಭಾಗದ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 10 ಕಂಪ್ಯೂಟರ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಶಾಹಿ ಎಕ್ಸ್ಪೋರ್ಟ್ ನವರು ವಿತರಿಸಿದ್ದಾರೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಮತ್ತಷ್ಟು ಸೌಲಭ್ಯಗಳನ್ನು ನೀಡಬೇಕೆಂದು ಯುವ ಮುಖಂಡ ಮೋಹನ್ ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ನ ಅಧಿಕಾರಿಗಳ ಬಳಿ ಮನವಿ ಮಾಡಿದರು.
ಇದೇ ವೇಳೆ ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ನ ಅಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಾದ ಕೆ.ವಿಶ್ವನಾಥ್, ಶಿವಪ್ರಸಾದ್, ಲತೇಶ್, ಚೇತನ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ಶಾಲಾ ಆಡಳಿತ ಮಂಡಳಿ ಹಾಗೂ ಮತ್ತಿತರರು ಇದ್ದರು.
*ವರದಿ : ಗಿರೀಶ್ ರಾಜ್ ಮಂಡ್ಯ*