ಬೆಂಗಳೂರು : ಯಶಸ್ಸಿಗೆ ಕೇವಲ ಅದೃಷ್ಟ ಅಷ್ಟೇ ಅಲ್ಲ ಅದನ್ನ ಸಾಕಾರಗೊಳಿಸಲು ಅಗತ್ಯ ತಯಾರಿಯೂ ಅಷ್ಟೇ ಮುಖ್ಯ ಎಂದು ಗ್ಲೋಬಲ್ ಅಕಾಡೆಮಿ ಅಪ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕರಾದ ಐಶ್ವರ್ಯ ಡಿಕೆಎಸ್ ಹೆಗ್ಡೆ ಅಭಿಪ್ರಾಯಪಟ್ಟರು.
ಇಂದು ಹೆಸರುಘಟ್ಟ ರಸ್ತೆಯಲ್ಲಿ ಇರುವ ಸೌಂದರ್ಯ ಕಾಂಪೋಸಿಟ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಒರಿಯೆಂಟೇಶನ್ ಕಾರ್ಯಕ್ರಮ ಇಗ್ನೈಟ್ 2024 ಗೆ ಚಾಲನೆ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಶಿಕ್ಷಣ ನಮ್ಮ ಉತ್ತಮ ಜೀವನದ ಗಟ್ಟಿ ಬೇರುಗಳಾಗಿವೇ. ಸೌಂದರ್ಯ ಶಿಕ್ಷಣ ಸಂಸ್ಥೆ ಗಳಂತಹ ಉತ್ತಮ ಸಂಸ್ಥೆಗಳು ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ. ನಮ್ಮ ಮಕ್ಕಳು ತಮ್ಮ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಬೇಕು. ಈ ಬೆಳವಣಿಗೆಯಲ್ಲಿ ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಯಾವುದೇ ಕ್ಷೇತ್ರದಲ್ಲಾದರೂ ಕೂಡಾ ಯಶಸ್ಸು ಪಡೆಯಲು ಕೇವಲ ಅದೃಷ್ಟ ಸಾಕಾಗಲ್ಲ. ಅದೃಷ್ಟದಿಂದ ದೊರೆತಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳುವುದು ಬಹಳ ಮುಖ್ಯ. ಸೋಲನ್ನ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಪ್ರತಿ ದಿನವೂ ಒಂದು ಹೊಸ ಅವಕಾಶವನ್ನ ನಮ್ಮ ಮುಂದೆ ತೆರೆದಿಡುತ್ತದೆ. ನನ್ನ ತಂದೆಯವರು ಯಾವಾಗಲೂ ಹೇಳುವ ಮಾತುಗಳಾದ “ದೇವರು ವರವನ್ನೂ ಕೊಡುವುದಿಲ್ಲ ಶಾಪವನ್ನೂ ಕೊಡುವುದಿಲ್ಲ – ಕೇವಲ ಅವಕಾಶವನ್ನು ಕೊಡುತ್ತಾನೆ. ಅದರ ಸದುಪಯೋಗ ಅಥವಾ ದುರಪಯೋಗ ನಮ್ಮ ಪ್ರಯತ್ನದಲ್ಲಿದೆ”. ಅದನ್ನ ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ನಮ್ಮ ಕೌಶಲ್ಯಗಳನ್ನ ವೃದ್ದಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಹೊಸ ಅವಕಾಶಗಳನ್ನು ಯಸಸ್ಸಾಗಿ ಪರಿವರ್ತಿಸಿಕೊಳ್ಳಲು ಅನುವು ಮಾಡಿಕೊಡುತ್ತವೆ. ಪ್ರಯತ್ನದ ಸಂಧರ್ಭದಲ್ಲಿ ಯಾರೂ ನಮ್ಮನ್ನು ಶ್ಲಾಘಿಸುವುದಿಲ್ಲ, ಆದರೆ ನಿರಂತರ ಪ್ರಯತ್ನ ನಮ್ಮನ್ನ ಒಂದು ದಿನ ಯಶಸ್ಸಿನ ಮೆಟ್ಟಿಲನ್ನು ಹತ್ತಿಸುತ್ತದೆ. ಹಾಗೆಯೇ ಶ್ಲಾಘನೆಗೂ ಪಾತ್ರರಾಗುವಂತೆ ಮಾಡುತ್ತದೆ ಎಂದರು.
ಸಂವಹನ ಬಹಳ ಮುಖ್ಯ:
ಮೊಬೈಲ್ ನಂತಹ ಆಧುನಿಕ ಸಂಪರ್ಕ ಸಾಧನಗಳು ನಮ್ಮ ಮನೆಯಲ್ಲಿನ ಸಂವಹನವನ್ನ ಕಡಿಮೆ ಮಾಡಿವೆ. ಮಕ್ಕಳು ತಮ್ಮ ಪೋಷಕರೊಂದಿಗೆ, ಪೋಷಕರು ತಮ್ಮ ಮಕ್ಕಳೊಂದಿಗೆ ಮಾತನಾಡುವ ಹಾಗೂ ಆಲಿಸುವ ನಿಟ್ಟಿನಲ್ಲಿ ಸಂವಹನ ಬೆಳಿಸಿಕೊಳ್ಳಬೇಕು. ಮಕ್ಕಳ ತಮ್ಮೊಂದಿಗೆ ನಿರಂತರ ಸಂವಹನಕ್ಕೆ ಪೋಷಕರು ಅನುವು ಮಾಡಿಕೊಡಬೇಕು. ಇದರಿಂದ ಮಕ್ಕಳು ಹೊರ ಪ್ರಪಂಚದ ಜೊತೆಯೂ ಉತ್ತಮವಾಗಿ ತಮ್ಮ ಸಂಪರ್ಕ ಹಾಗೂ ಸಂವಹನ ಇಟ್ಟುಕೊಳ್ಳಲು ಸಾಧ್ಯ. ಉತ್ತಮ ಕಮ್ಯೂನೀಕೇಷನ್ ಸ್ಕಿಲ್ಸ್ಗಳಿಂದ ಹೆಚ್ಚಿನದ್ದನ್ನು ಸಾಧಿಸಲು ಸಾಧ್ಯ ಎಂದರು.
ಸೌಂದರ್ಯ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ನ ಸಂಸ್ಥಾಪಕರಾದ ಸೌಂದರ್ಯ ಪಿ ಮಂಜಪ್ಪ ಮಾತನಾಡಿ, ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಹಿರಿದಾಗಿದೆ. ಶಿಕ್ಷಕರು ಹಾಗೂ ಸಿಬ್ಬಂದಿಗಳ ಅಪಾರ ಶ್ರಮದಿಂದ ಸೌಂದರ್ಯ ಕಾಂಪೋಸಿಟ್ ಕಾಲೇಜು ಕಳೆದ 18 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೆಲವೊಮ್ಮೆ ಕಠಿಣವಾದ ನಿರ್ಧಾರಗಳನ್ನು ಶಿಕ್ಷಕರು ತಗೆದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಅಂತಹ ಸಂಧರ್ಭಗಳಲ್ಲಿ ಪೋಷಕರು ಶಿಕ್ಷಕರ ಜೊತೆ ನಿಲ್ಲಬೇಕು ಎಂದರು.
ಸೌಂದರ್ಯ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಸಿಇಒ ಕೀರ್ತನ್ ಕುಮಾರ್ ಮಾತನಾಡಿ, ಉತ್ತಮ ಭವಿಷ್ಯವನ್ನ ರೂಪಿಸುವ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಬಹಳಷ್ಟು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಐಐಟಿ, ಎನ್ಐಟಿ ಯಂತಹ ಸಂಸ್ಥೆಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಎರಡು ವರ್ಷಗಳ ಶಿಸ್ತಿನ ಅಧ್ಯಯನ ಜೀವನದಲ್ಲಿ ಬಹಳಷ್ಟು ಸಾಧಿಸಲು ಅನುವು ಮಾಡಿಕೊಡಲಿದೆ ಎಂದರು.
ಪಿಯುಸಿ, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ವೇಳೆ ಲ್ಯಾಪ್ಟಾಪ್ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೌಂಧರ್ಯ ಎಜುಕೇಷನಲ್ ಟ್ರಸ್ಟ್ನ ಟ್ರಸ್ಟಿಗಳಾದ ವರುಣ್ ಕುಮಾರ್, ಡಾ. ಪ್ರತಿಕ್ಷಾ ಎಸ್ ಕೀರ್ತನ್, ನಿಶ್ಮಿತಾ ವರುಣ್, ಪ್ರಾಂಶುಪಾಲರಾದ ಕ್ಯಾಪ್ಟನ್ ಮಹಾಬಲೇಶ್ವರ ತುಂಗಾ ಸೇರಿದಂತೆ ಪೋಷಕರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್, ತನ್ನ ತಪ್ಪಿಗೆ 49 ವರ್ಷಗಳಾದರೂ ಕ್ಷಮೆ ಕೇಳಿಲ್ಲ: ಸಿ.ಟಿ ರವಿ