ಬೆಂಗಳೂರು: ದಿನಾಂಕ: 07-06-2024 ರಂದು ಬಿಡುಗಡೆಯಾಗಲಿರುವ “ಹಮಾರ ಬಾರಾಹ್” ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ, ರಾಜ್ಯದ ವಿವಿಧ ಜಿಲ್ಲೆ / ತಾಲ್ಲೂಕುಗಳ ಮುಸ್ಲಿಂ ಸಂಘಗಳಿಂದ ಸ್ವೀಕೃತವಾಗಿರುವ ಮನವಿಗಳಲ್ಲಿ ಜೀ ಸಿನಿಮಾ ವಾಹಿನಿಯು ಇತ್ತೀಚಿಗೆ “ಹಮಾರ ಬಾರಾಹ್” ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪುಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಒಂದು ಷಡ್ಯಂತ್ರವಾಗಿದೆ. ಚಲನಚಿತ್ರಗಳು ಸಮಾಜದಲ್ಲಿ ಮಾರ್ಗದರ್ಶನವಾಗಬೇಕು, ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲ. ಅದರಂತೆ, ಜೂನ್ 07, 2024 ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ “ಹಮಾರೆ ಬಾರಾಹ್” ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡದೇ ಇರಲು ಕೋರಲಾಗಿದೆ.
ಈ ಚಲನಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಲಾಗಿ “ಹಮಾರೆ ಬಾರಾಹ್” ಚಲನಚಿತ್ರದಲ್ಲಿ ಪವಿತ್ರ ಗ್ರಂಥ ಖುರಾನ್ ಶರೀಫರಲ್ಲಿ ಇರುವ ಸೂರೆ ಎ ಬಕರ ದ ಸಾಲಿನಲ್ಲಿನ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ನಿರ್ಮಾಪಕ ಹಾಗೂ ನಿರ್ದೇಶಕರು ತಪ್ಪು ಅಪಾರ್ಥ ಸೃಷ್ಟಿಸಿ, ಪಚೋದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ, ಕೆಲವು ಧರ್ಮದ ಜನರುಗಳನ್ನು ಕೆರಳಿಸುವ ಹಾಗೂ ಜನರಲ್ಲಿ ಆಕ್ರೋಶ ಉಂಟು ಮಾಡಿ ದ್ವೇಷ ಭಾವನೆಗಳನ್ನು ಪುಚೋದಿಸುವ ಸನ್ನಿವೇಶಗಳು ಹಾಗೂ ಸಮಾಜವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನದಂತೆ ಕಾಣುತ್ತದೆ. ಒಂದು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಂಭವವಿದೆ.
ಒಂದು “ಹಮಾರೆ ಬಾರಾಹ್” ಚಲನಚಿತ್ರವನ್ನು ಬಿಡುಗಡೆಗೆ ಅನುಮತಿ ಕೊಟ್ಟಲ್ಲಿ ರಾಜ್ಯದಲ್ಲಿ ಶಾಂತಿಗೆ ಭಂಗವುಂಟು ಮಾಡುವ ಹಾಗೂ ಜಾತಿ ಜಾತಿಗಳ ಮಧ್ಯೆ ದ್ವೇಷವುಂಟು ಮಾಡುವ, ಒಂದು ಧರ್ಮದ ಪದ್ಧತಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿ ಧರ್ಮಗಳ ಮಧ್ಯೆ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಅಥವಾ ಸೌಹಾರ್ದತೆ ಹದಗೆಡಲು ಕಾರಣವಾಗುವ ಸಾಧ್ಯತೆಯ ಬಗ್ಗೆ ಹಾಗೂ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಬಿಂಬಿತವಾಗಿರುವ ಸನ್ನಿವೇಶಗಳು ಕಂಡುಬಂದಿರುತ್ತವೆ.ಈ ಚಲನ ಚಿತ್ರವನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸುವ ಮುನ್ನ ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2)ರಡಿ ಸಂಬಂಧಪಟ್ಟವರಿಗೆ ನೋಟೀಸನ್ನು ಜಾರಿ ಮಾಡಿ ವಿವರಣೆಯನ್ನು ಪಡೆಯಬೇಕಾಗಿದ್ದು, ಆದರೆ ಸದರಿ ಚಲನಚಿತ್ರದ ನಿರ್ದೇಶಕರಾದ ಶ್ರೀ ಕಮಲ್ ಚಂದ್ರ ಮತ್ತು ನಿರ್ಮಾಪಕರುಗಳಾದ ಶ್ರೀ ಬೀರೇಂದ್ರ ಭಗತ್, ಶ್ರೀ ರವಿ ಎಸ್.ಗುಪ್ತ, ಶ್ರೀ ಶಿಯೋ ಬಲಕ್ ಸಿಂಗ್, ಶ್ರೀ ಸಂಜಯ್ ನಾಗಪಾಲ್ ಹಾಗೂ ಮತ್ತಿತರರುಗಳು ನೆರೆ ರಾಜ್ಯದಲ್ಲಿದ್ದು, ಸದರಿಯವರಿಗೆ ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2) ರಡಿ ನೋಟೀಸು ಜಾರಿ ಮಾಡಿ, ಅವರುಗಳಿಂದ ವಿವರಣೆ ಪಡೆದು ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ಇಲ್ಲದಿರುವುದರಿಂದ, ಹಾಗೂ “ಹಮಾರೆ ಬಾರಾಹ್” ಚಲನಚಿತ್ರವು ದಿನಾಂಕ: 07.06.2024ರಂದು ಬಿಡುಗಡೆಗೊಳ್ಳಲಿದ್ದು, ಚಲನಚಿತ್ರವು ಬಿಡುಗಡೆಗೊಂಡಲ್ಲಿ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಗುವ ಪರಿಸ್ಥಿತಿ ಉದ್ಭವಿಸಬಹುದೆಂದು ಮನಗಂಡು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯಸ್ಥೆ (Law and Order) ಕಾಪಾಡುವ ಹಿತದೃಷ್ಠಿಯಿಂದ ಸದರಿ ಚಲನಚಿತ್ರವನ್ನು ನಿಷೇಧಿಸುವ ಬಗ್ಗೆ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 03 ಸಿಎನ್ಎ 2024 ಬೆಂಗಳೂರು, ದಿನಾಂಕ: 05.06.2024.ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(1) ಮತ್ತು 15(5) ರಡಿಯಲ್ಲಿ “ಹಮಾರೆ ಬಾರಾಹ್” ಎಂಬ ಟ್ರೈಲರ್ ಹಾಗೂ ಸಿನಿಮಾವನ್ನು ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ/ ಸಾಮಾಜಿಕ ಜಾಲತಾಣ/ ಸಿನಿಮಾ ಮಂದಿರಗಳು/ ಖಾಸಗಿ ಟಿವಿ ಚಾಲನ್ಗಳು/ ಇತರೆ ಮಾಧ್ಯಮಗಳ ಮೂಲಕ ಪಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶಿಸಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆದೇಶವನ್ನು ಹೊರಡಸಿದೆ.