ಬೆಂಗಳೂರು: ಬೆಂಗಳೂರಿನ ಉಲ್ಲಾಳು ಬಳಿ ಇರುವ ನಗರ ಸಶಸ್ತ್ರ ಮೀಸಲು ಪಡೆ’ (ಸಿಎಆರ್) ಪಶ್ಚಿಮ ಘಟಕದ ಆವರಣದಲ್ಲಿರುವ ಶಸ್ತ್ರಾಗಾರಕ್ಕೆ ನುಗ್ಗಿ, ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಅಪರಿಚಿತರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಸಿಎಆರ್ನ ಕಾನ್ಸ್ಟೆಬಲ್ ರುದ್ರೇಶ್ ನಾಯ್ಕ ನೀಡಿದ ದೂರಿನ ಮೇರೆಗೆ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಉಲ್ಲಾಳು ಬಳಿ ನಗರ ಸಶಸ್ತ್ರ ಮೀಸಲು ಪಡೆಯ ಪಶ್ಚಿಮ ಘಟಕದಲ್ಲಿ ಕಾನ್ ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರುದ್ರೇಶ್, ಫೆ. 8ರಂದು ಬೆಳಗ್ಗೆ 8 ಗಂಟೆಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು.
ನಿಯಂತ್ರಣ ಕೋಣೆ ಪಕ್ಕದ ಶಸ್ತ್ರಾಗಾರದ ಭದ್ರತೆಗೆ ಅವರನ್ನು ನಿಯೋಜಿಸಲಾಗಿತ್ತು. ಬಳಿಕ 10 ಗಂಟೆ ಸುಮಾರಿಗೆ ಸುಮಾರು 15-20 ಮಂದಿ ಸ್ಥಳಕ್ಕೆ ಬಂದು, ಈ ಜಾಗ ನಮಗೆ ಸೇರಿದ್ದು, ಕೂಡಲೇ ನೀವು ಖಾಲಿ ಮಾಡಬೇಕು ಎಂದು ಏರುಧ್ವನಿಯಲ್ಲಿ ಕೂಗಾಡಿದ್ದರು. ಅದನ್ನು ರುದ್ರೇಶ್, ಈ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಎಂದಿದ್ದರು.
ಆಕ್ರೋಶಗೊಂಡ ಆರೋಪಿಗಳು, ರುದ್ರೇಶ್ ಸಮವಸ್ತ್ರ ಎಳೆದಾಡಿ ಹಲ್ಲೆ ನಡೆಸಿದ್ದರು. ಯಾರಾದರೂ ಈ ಸ್ವತ್ತಿನ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಮಿ ಹಾಕಿದ್ದರು. ಆ ಬಳಿಕ ಶಸ್ತ್ರಾಗಾರದಿಂದ ಹೊರಗಡೆ ಬಂದಾಗ ಅಲ್ಲಿಯೂ 60ಕ್ಕೂ ಹೆಚ್ಚು ಮಂದಿ ಸೇರಿದ್ದರು. ಜತೆಗೆ ನಾಲ್ಕು ಜೆಸಿಬಿಗಳು, ಎರಡು ಕ್ಯಾಂಟರ್, ತಲಾ ಒಂದು ಲಾರಿ, ನೀರಿನ ಟ್ಯಾಂಕರ್ ಗಳನ್ನು ಸ್ಥಳಕ್ಕೆ ತರಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. ಎಂದು
ಉಲ್ಲಾಳ ಉಪನಗರದಲ್ಲಿರುವ ಪಶ್ಚಿಮ ಸಿಎಆರ್ ಆವರಣದಲ್ಲಿರುವ ಶಸ್ತ್ರಾಗಾರ ಇರುವ ಜಾಗ ವಿವಾದದಲ್ಲಿದೆ. ಈ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗೆ ಆರೋಪಿಗಳ ಪರವಾಗಿ ಕೋರ್ಟ್ ಆದೇಶ ನೀಡಿತ್ತು ಎಂದು ಹೇಳಲಾಗಿದೆ.