ಬೆಂಗಳೂರು : ಇಂದಿನಿಂದ 23 ರವರೆಗೆ ಒಟ್ಟು ಹತ್ತು ದಿನಗಳ ಕಾಲ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಕಲಾಪ ನಡೆಯಲಿದ್ದು, ಫೆ.15ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ವಂದನಾ ನಿರ್ಣಯ ನಡೆಯಲಿದೆ. ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಶ್ವೇತ ಹೊಸ್ತಿಲಿನಲ್ಲಿ ಮಂಡಿಸುತ್ತಿರುವುದರಿಂದ ಬಜೆಟ್ ತೀವ್ರ ಕುತೂಹಲ ಕೆರಳಿಸಿದೆ ಎನ್ನಲಾಗುತ್ತಿದೆ.
ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ, ಬರ ಪರಿಹಾರ ಬಿಡುಗಡೆ ವಿಳಂಬ, ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್ ಆರೋಪ, ರಾಜ್ಯದ ಹಣಕಾಸು ಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸೋಮವಾರದಿಂದ ಆರಂಭವಾಗಲಿರುವ 10 ದಿನಗಳ ವಿಧಾನ ಮಂಡಲದ ಅಧಿವೇಶನದಲ್ಲಿ ಕಾವೇರಿದ ಚರ್ಚೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.
ಸರ್ಕಾರ ಹಾಗೂ ಪ್ರತಿಪಕ್ಷದ ನಡುವೆ ಸದನದ ಹೊರಗೆ ಈಗಾಗಲೇ ಸಾಕಷ್ಟು ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದು, ಅಧಿವೇಶನದಲ್ಲಿ ನೇರಾನೇರ ವಾಗ್ವಾದಗಳು ನಡೆಯುವ ಲಕ್ಷಣವಿದೆ. ಫೆ.12ರಿಂದ 23ರವರೆಗೆ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
40 ಪರ್ಸೆಂಟ್ ಕಮಿಷನ್ ಗುಮ್ಮ:
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣಅವರು ಕಾಂಗ್ರೆಸ್ ಸರ್ಕಾರದಲ್ಲೂ ಅಧಿಕಾರಿಗಳಿಂದ 40 ಪರ್ಸೆಂಟ್ ಕಮಿಷನ್ಗೆ ಒತ್ತಾಯ ಬರುತ್ತಿದೆ ಎಂದು ಆರೋಪ ಮಾಡಿರುವುದು ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ
ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ ವಿಧೇಯಕ ಸದನದಲ್ಲಿ ಮಂಡಿಸುವಂತೆ ರಾಜ್ಯಪಾಲರು ವಾಪಸ್ ಕಳಿಸಿರುವ ರಾಜ್ಯಾದ್ಯಂತ ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲರೀತಿಯನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ’ವನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗೆ ವಾರ್ಷಿಕ ಸುಮಾರು 55 ಸಾವಿರ ಕೋಟಿ ರು.ಗಿಂತ ಪತ್ರ ಹೆಚ್ಚು ಬೇಕಾಗಿರುವುದರಿಂದ ಈ ಮೊತ್ತವನ್ನು ಹೇಗೆ ಕ್ರೋಢೀಕರಿಸುತ್ತಾರೆ, ಯಾರಿಗೆ ತೆರಿಗೆ ಹೊರೆ ಬೀಳಲಿದೆ ಎಂಬುದನ್ನು ಜನರು ಕಾಯುತ್ತಿದ್ದಾರೆ.
ಶ್ವೇತ ಪತ್ರ ಮಂಡನೆ:
ಕೇಂದ್ರದಿಂದ ಬಂದಿರುವ ಹಣ ಸೇರಿದಂತೆ ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿರುವಂತೆ ಶ್ವೇತ ಮಂಡಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಂದ್ರ ನೀಡಿರುವ ಹಣ, ಗ್ಯಾರಂಟಿ ಯೋಜನೆಯಿಂದ ಅನೇಕ ಅಭಿವೃದ್ದಿಕಾರ್ಯ ನಡೆಯುತ್ತಿಲ್ಲ ಎಂದು ತಿರುಗೇಟು ನೀಡಲು ಪ್ರತಿಪಕ್ಷ ಸಜ್ಜಾಗಿದೆ.
ಧಾರ್ಮಿಕ ಅಸ್ತ್ರ ಪ್ರಯೋಗ:
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿರುವ ಧ್ವಜ ಸ್ತಂಭದಲ್ಲಿ ಅನುಮತಿ ಪಡೆಯದೆ ಹಾರಿಸಲಾ ಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಘಟನೆ, ಅಯೋಧ್ಯೆ ಶ್ರೀರಾಮ ಮೂರ್ತಿಯ ಬಗ್ಗೆ ಸಚಿವ ಕೆ.ಎನ್. ರಾಜಣ್ಣ ನೀಡಿದ್ದ ಹೇಳಿಕೆ, ಕಾಂಗ್ರೆಸ್ ಪಕ್ಷ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಬಹಿಷ್ಕರಿಸಿರುವ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ. ರಾಷ್ಟ್ರೀಯ ಶಿಕ್ಷಣನೀತಿ ಕೈ ಬಿಟ್ಟು ರಾಜ್ಯ ಶಿಕ್ಷಣನೀತಿಯನ್ನು ರೂಪಿಸಲು ಮುಂದಾಗಿರುವ ಸರ್ಕಾರದ ಕ್ರಮ ಚರ್ಚೆಯಾಗುವ ಸಂಭವವಿದೆ.
ನಿಷೇಧಾಜ್ಞೆ ಜಾರಿ:
ಫೆ.12 ರಿಂದ 23 ರವರೆಗೆ ಒಟ್ಟು ಹತ್ತು ದಿನಗಳ ಕಾಲ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಕಲಾಪದ ಹಿನ್ನೆಲೆಯಲ್ಲಿ ಫೆ.12 ರಿಂದ 23ರವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ವಿಧಾನಸೌಧಕಟ್ಟಡದ2ಕಿ.ಮೀ.ವ್ಯಾಪ್ತಿಯಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.