ಹಾಸನ : ಹೈಕಮಾಂಡ್ಗೆ ರಾಜಣ್ಣ ಕೇರ್ ಮಾಡಲ್ಲ ಎಂಬ ಬಿ.ಶಿವರಾಮ್ ಹೇಳಿಕೆಗೆ ಗರಂ ಆದ ಸಹಕಾರ ಸಚಿವ KN ರಾಜಣ್ಣ, ಯಾರೋ ಮುಖಂಡರನ್ನು ಮೆಚ್ಚಿಸೋ ನಡವಳಿಕೆ ನನಗೆ ಬೇಕಿಲ್ಲ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕು. ಹೈಕಮಾಂಡ್ಗೆ ಹೆದರಲ್ಲ ಅನ್ನೋದು ನನ್ನಿಷ್ಟ. ನಾನು ಯಾರಿಗೆ ಹೆದರಬೇಕೋ ಅವರಿಗೆ ಮಾತ್ರ ಹೆದರುತ್ತೇನೆ. ನಾನು ಹೈಕಮಾಂಡ್ಗೆ ನಿಷ್ಠೆ ಹೊಂದಿದ್ದೇನೆ, ಆದರೆ ಗುಲಾಮನಲ್ಲ ಎಂದು ಗುಡುಗಿದ್ದಾರೆ.
ಲೋಕಸಭಾ ಚುನಾವಣೆಯಲಿ ಸಮಯದಲ್ಲಿ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎನ್ ರಾಜಣ್ಣ ಕಾಂಗ್ರೆಸ್ ಪಕ್ಷದಿಂದ ಹೋಗೋರಿಲ್ಲ ಎಂದು ನಾನು ಹೇಳುವುದಿಲ್ಲ. ಬೇರೆ ಪಕ್ಷದಿಂದ ಬರುವವರು ಇಲ್ಲ ಎಂದು ಹೇಳಲ್ಲ. ರಾಜಕೀಯ ದೃಢೀಕರಣ ಅವರ ರಾಜಕೀಯ ಭವಿಷ್ಯದ ಆಧಾರದಲ್ಲಿ ಇರುತ್ತದೆ. ಇದು ಸರ್ವೆ ಸಾಮಾನ್ಯ. ಈಗಲೇ ಅವರು ಬರುತ್ತಾರೆ ಇವರು ಬರುತ್ತಾರೆ ಎನ್ನಲು ಆಗಲ್ಲ ಎಂದರು.
ತುಮಕೂರು ಅಭ್ಯರ್ಥಿ ಮುದ್ದು ಹನುಮೇಗೌಡ ಆಗಲಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮತ್ತೊಮ್ಮೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ರಾಜಣ್ಣ, ನಾನು ಶೇ.99 ರಷ್ಟು ಅವರು ಅಭ್ಯರ್ಥಿ ಆಗಬಹುದು ಎಂದು ಹೇಳಿದ್ದೇನೆ. ಇನ್ನೂ ಒಂದು ಪರ್ಸೆಂಟ್ ಇದೆಯಲ್ಲ. ನಾನೇನು ಅಭ್ಯರ್ಥಿ ಅಗುತ್ತಾರೆ ಅಂತ ಹೇಳಿದ್ದೇನಾ? ಆಗಬಹುದು ಎಂದಷ್ಟೇ ಹೇಳಿದ್ದೇನೆ.
ಅವರೇ ಅಭ್ಯರ್ಥಿ ಎಂದು ಹೇಳಲು ನಾನು ಹೈಕಮಾಂಡ್ ಅಲ್ಲ. ನನ್ನ ಹೈ ಕಮಾಂಡ್ ನನ್ನ ಕ್ಷೇತ್ರದ ಮತದಾರರು. ಹೈಕಮಾಂಡ್ ಮಾತು ಯಾವಾಗ ಕೇಳಬೇಕೋ ಕೇಳುತ್ತೇನೆ ಅವರ ಮಾತು ದಿಕ್ಕರಿಸುವುದಿಲ್ಲ. ಆದರೆ ಅಂತಿಮವಾಗಿ ನಾನು ನಂಬುವುದು ನನ್ನ ಮತದಾರರನ್ನು ಎಂದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿ ಯಾರು ಎಂದು ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದೆ ಎಂದು ಹೇಳಿದ ರಾಜಣ್ಣ, ರಣದೀಪ್ ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಾರೆ. ಹಾಸನ ಜಿಲ್ಲೆಯಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳು ಇದ್ದಾರೆ. ಅಂತಿಮವಾಗಿ ಗೆಲುವೇ ಮಾನದಂಡವಾಗಿರಲಿದೆ ಎಂದರು.