ಹಂಪಿ : ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ತೆರೆ ಬಿತ್ತು. ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಮೂರು ದಿನಗಳಲ್ಲಿ ಬರೋಬ್ಬರಿ ಹತ್ತು ಲಕ್ಷ ಜನ ಹರಿದು ಬಂದಿದ್ದು, ವಿಜಯನಗರ ಜಿಲ್ಲಾಡಳಿತದ ಆಶಯದಂತೆ ಉತ್ಸವ ಭರ್ಜರಿ ಯಶಸ್ಸು ಕಂಡಿದೆ. ಜನೋತ್ಸವ, ವಿಜೃಂಭಣೆಯ ಸಾಂಸ್ಕೃತಿಕ ವೈಭವದೊಂದಿಗೆ ಹಂಪಿ ಉತ್ಸವ ಭಾನುವಾರ ಸಂಜೆ ಸಂಪನ್ನಗೊಂಡಿತು.
ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ, ಹಂಪಿ ಉತ್ಸವಕ್ಕೆ ಕಳೆ ತುಂಬಿದರು. ವಿದೇಶಿ ಪ್ರವಾಸಿಗರೂ ಆಗಮಿಸಿ, ಉತ್ಸವದ ವೈಭವವನ್ನು ಕಣ್ಣುಂಬಿಕೊಂಡರು. ಮೊದಲ ದಿನ 2 ಲಕ್ಷ, ಎರಡನೆ ದಿನ ಮೂರು ಲಕ್ಷ ಜನ ಆಗಮಿಸಿದ್ದರೆ, ಮೂರನೇ ದಿನ ಐದು ಲಕ್ಷ ಜನ ಸೇರಿದ್ದರು.
ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಹಂಪಿಗೆ ಬರುವ ಎರಡು ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ಜಾನಪದ ವಾಹಿನಿ ವೈಭವ: ಹಂಪಿ ಉತ್ಸವದ ಕೊನೇ ದಿನ ಉದ್ದಾನ ವೀರಭದ್ರೇಶ್ವರ ದೇವಾಲಯದಿಂದ ಆರಂಭಗೊಂಡ ಜಾನಪದ ವಾಹಿ ನಿಯ ಭವ್ಯ ಮೆರವಣಿಗೆ ಹಂಪಿ ಸ್ಮಾರಕಗಳ ಮಧ್ಯೆ ಸಾಗಿ ಬಂತು.
ವಿವಿಧ ಕಲಾ ತಂಡಗಳು, ವಿಜಯ ನಗರದ ನೆಲದ ಕಲಾಲೋಕವನ್ನು ಜನರಿಗೆ ಉಣಬಡಿಸಿದವು. ದೇಸಿ ಕಲೆ ಮೆರವಣಿಗೆಯಲ್ಲಿ ಅನಾವರಣಗೊಂಡಿತು.ಹಿರಿಯ ನಟ, ನಿರ್ದೇಶಕ ರವಿಚಂದ್ರನ್ ಉತ್ಸವದಲ್ಲಿ ಭಾಗಿಯಾಗಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.