ಬೆಂಗಳೂರು : ಹಿಂದಿ ಹೇರಿಕೆ ಸೇರಿದಂತೆ ದಕ್ಷಿಣ ಭಾರತಕ್ಕೆ ಬಜೆಟ್ ನಲ್ಲಿ ಅನ್ಯಾಯ ಆಗುವುದರ ಕುರಿತು ನಿನ್ನೆ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಕುರಿತು ಮಾತನಾಡಿದರು.ಇದಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ ತಿರುಗೇಟು ನೀಡಿದ್ದು ನಮ್ಮ ದೇಶ ಭವ್ಯ ಭಾರತ ಹೀಗಾಗಿ ದೇಶವನ್ನು ಒಡೆಯುವಂತಹ ಮಾತುಗಳನ್ನು ಯಾರು ಆಡಬಾರದು ಎಂದು ತಿರುಗೇಟು ನೀಡಿದರು.
ಈ ವಿಷಯದ ಕುರಿತಾಗಿ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಭಾರತ ಭವ್ಯವಾದ ಭಾರತ. ಪಾಕಿಸ್ತಾನ ವಿಭಜನೆ ಆದಾಗ ನಾವು ಯಾರೂ ಹುಟ್ಟಿರಲಿಲ್ಲ. ಆದರೆ ಅದರ ಇತಿಹಾಸ ನಮಗೆ ಗೊತ್ತಿದೆ. ನಮ್ಮ ದೇಶ ಒಂದು ರಾಷ್ಟ್ರ ಒಂದು ದೇಶ ಅಂತಾನೇ ಇರಬೇಕು ಬೇಕು ಅಂತ ಡಿಕೆ ಸುರೇಶ್ ಗೆ ತಿರುಗೇಟು ಕೊಟ್ರು. ಸಂಸದ ಡಿಕೆ ಸುರೇಶ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಕೋಟ್ಯಾಂತರ ಜನರ ಬಲಿದಾನವಾಗಿದೆ.
ನೂರಾರು ವರ್ಷ ಹೋರಾಟಗಳು ನಡೆದಿವೆ. ಗಾಂಧೀಜಿಯಿಂದ ಹಿಡಿದು ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯ ತರಲು, ದೇಶ ಒಗ್ಗೂಡಿಸಲು ಹೋರಾಟ ಮಾಡಿದ್ದಾರೆ. ಅನೇಕರು ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಯಾರೇ ಆದರೂ ದೇಶ ಒಗ್ಗೂಡಿಸುವ ಮಾತಾಡಬೇಕು. ಅದು ಬಿಟ್ಟು ಒಡೆಯೋ ಮಾತಾಡೋದು ಸರಿಯಲ್ಲ ಎಂದರು.