ಬೆಂಗಳೂರು : ಕಳೆದ ಕೆಲ ದಿನಗಳ ಹಿಂದೆ ಆರ್ಪಿಸಿ ಲೇಔಟ್ನ ಹೋಟೆಲ್ನಲ್ಲಿ ಯುವಕನೊಬ್ಬ ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿ ಕೈಗೆ ಕೊನೆಗೂ ಪೊಲೀಸರು ಕೋಳ ತೊಡಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಟ್ಟಿದ್ದಾರೆ.
ಸುಂಕದಕಟ್ಟೆಯ ವಿಘ್ನೇಶ್ವರನಗರದ ನಿವಾಸಿ ಚಂದನ್ ಬಂಧಿತನಾಗಿದ್ದು, ಆರ್ಪಿಸಿ ಲೇಔಟ್ ಹೋಟೆಲ್ಗೆ ತನ್ನ ಸ್ನೇಹಿತರ ಜತೆ ಬಂದಾಗ ಆತ ಈ ಕೃತ್ಯ ಎಸಗಿದ್ದ. ಈ ಬಗ್ಗೆ ಹೋಟೆಲ್ ವ್ಯವಸ್ಥಾಪಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ವಿಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಗ್ಯಾಸ್ ಡೆಲಿವರಿ ಬಾಯ್ ಆಗಿದ್ದ ಚಂದನ್, ಡಿ.30 ರಂದು ರಾತ್ರಿ 7.30ರಲ್ಲಿ ತನ್ನ ಸ್ನೇಹಿತರ ಜತೆಗೆ ಆರ್ಪಿಸಿ ಲೇಔಟ್ನಲ್ಲಿರುವ ಹೋಟೆಲ್ಗೆ ತಿಂಡಿ ತಿನ್ನಲು ಬಂದಿದ್ದ. ಆ ವೇಳೆ ಹೋಟೆಲ್ ಕ್ಯಾಶ್ ಕೌಂಟರ್ನಲ್ಲಿ ನಿಂತಿದ್ದ ಯುವತಿಗೆ ಈ ಸ್ನೇಹಿತರ ಕಣ್ಣಿಗೆ ಬಿದ್ದಿದ್ದಳು. ಆ ಯುವತಿ ಮೈ ಮುಟ್ಟು ನೋಡೋಣ ಎಂದು ಚಂದನ್ಗೆ ಆತನ ಸ್ನೇಹಿತರು ಸವಾಲು ಹಾಕಿದ್ದರು.
ಈ ಸವಾಲು ಸ್ವೀಕರಿಸಿದ ಚಂದನ್, ಕ್ಯಾಶ್ ಕೌಂಟರ್ನಲ್ಲಿ ನಿಂತಿದ್ದ ಯುವತಿಯನ್ನು ಹಿಂದಿನಿಂದ ಹೋಗಿ ಮುಟ್ಟಿದ್ದ. ಈ ಅಸಭ್ಯ ವರ್ತನೆಗೆ ಸಂತ್ರಸ್ತೆ ಕಿಡಿಕಾರಿದ್ದಳು. ತಕ್ಷಣವೇ ಹೋಟೆಲ್ನಿಂದ ಸ್ನೇಹಿತರ ಜತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.