ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದೆ. ಈ ಬೆಳವಣಿಗೆಯಿಂದ ವೈದ್ಯಲೋಕವೇ ಅಚ್ಚರಿಯಲ್ಲಿದೆ. ವೈದ್ಯರಿಗೆ ಸವಾಲಾದ ಹೃದಯಾಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಲು ರಾಜ್ಯದ ಪ್ರಮುಖ ಆಸ್ಪತ್ರೆಯೊಂದು ಮುಂದಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹೃದ್ರೋಗಕ್ಕೆ ಬಲಿಯಾಗುತ್ತಿರುವ ಕಾರಣವನ್ನು ಪತ್ತೆಹಚ್ಚಲು ಪ್ರತಿಷ್ಠಿತ ಜಯದೇವ ಆಸ್ಪತ್ರೆ ಮುಂದಾಗುತ್ತಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಒಂದರಲ್ಲೇ ಕಳೆದ ಐದಾರು ವರ್ಷದಲ್ಲಿ ಬರೋಬ್ಬರಿ 7 ಸಾವಿರ ಯುವ ಜನರಿಗೆ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗಿದೆ. 15 ವರ್ಷ ಬಾಲಕರು ಮತ್ತು 19 ವರ್ಷದ ಯುವಕರಿಗೆ ಚಿಕಿತ್ಸೆ ನೀಡಲಾಗಿದೆ. ಮಹಿಳೆಯರಲ್ಲೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ.ಹೀಗಾಗಿ ಯುವಜನರಲ್ಲಿ ಇಷ್ಟೊಂದು ಆರೋಗ್ಯ ಸಮಸ್ಯೆ ಉಂಟಾಗಲು ಕಾರಣದ ಬಗ್ಗೆ ಅಧ್ಯಯನ ನಡೆಸಲು ಜಯದೇವ ಹೃದ್ರೋಗ ಸಂಸ್ಥೆ ಸಜ್ಜಾಗಿದೆ.
ಇತ್ತೀಚೆಗೆ ಆಗುತ್ತಿರೋ ಹೃದಯಾಘಾತಕ್ಕೆ 70% ರಷ್ಟು ಮಾಮೂಲಿ ಕಾರಣಗಳಿವೆ. ಆದರೆ ಉಳಿದ ಇನ್ನು 30% ರಷ್ಟು ಪ್ರಕರಣಗಳಿಗೆ ಕಾರಣವೇ ತಿಳಿದುಬಂದಿಲ್ಲ.
ಹೀಗಾಗಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಜಯದೇವ ಹೃದ್ರೋಗ ಸಂಸ್ಥೆ ಮುಂದಾಗಿರುವ ಕುರಿತು ಸಂಸ್ಥೆಯ ನಿರ್ದೇಶಕ ಎನ್.ಮಂಜುನಾಥ್ ಅವರೇ ಖಚಿತಪಡಿಸಿದ್ದಾರೆ.