ನವದೆಹಲಿ: ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್ 2000 ರ ಕೆಂಪು ಕೋಟೆ ದಾಳಿ ಪ್ರಕರಣದಲ್ಲಿ ತನಗೆ ಮರಣದಂಡನೆ ವಿಧಿಸಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನು ಒಳಗೊಂಡ ಪೀಠವು ವಿದ್ಯುನ್ಮಾನ ದಾಖಲೆಗಳನ್ನು ಪರಿಗಣಿಸಬೇಕೆಂಬ ಪ್ರಾರ್ಥನೆಯನ್ನು ಒಪ್ಪಿಕೊಂಡಿದೆ ಎಂದು ಹೇಳಿದೆ.
“ವಿದ್ಯುನ್ಮಾನ ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಪ್ರಾರ್ಥನೆಯನ್ನು ನಾವು ಸ್ವೀಕರಿಸಿದ್ದೇವೆ. ಅವನ ಅಪರಾಧ ಸಾಬೀತಾಗುತ್ತದೆ. ಈ ನ್ಯಾಯಾಲಯವು ತೆಗೆದುಕೊಂಡ ಅಭಿಪ್ರಾಯವನ್ನು ನಾವು ದೃಢೀಕರಿಸುತ್ತೇವೆ ಮತ್ತು ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸುತ್ತೇವೆ” ಎಂದು ನ್ಯಾಯಪೀಠ ಹೇಳಿದೆ.
2000ನೇ ಇಸವಿಯ ಡಿಸೆಂಬರ್ 22ರಂದು ಕೆಂಪುಕೋಟೆಗೆ ನುಗ್ಗಿದ ಆರಿಫ್, ವಿವೇಚನಾರಹಿತವಾಗಿ ಗುಂಡು ಹಾರಿಸಿ ಮೂವರ ಸಾವಿಗೆ ಕಾರಣನಾಗಿದ್ದ.