ಬೆಂಗಳೂರು: ಬೀದರ್ನ ದಸರಾ ಮೆರವಣಿಗೆ ಸಂದರ್ಭದಲ್ಲಿ ಶಮಿ ವೃಕ್ಷ ಪೂಜೆಗೆ ಹೆಚ್ಚು ಜನರು ಹೋಗಿದ್ದ ವಿಡಿಯೋ ಹರಿಬಿಡಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ, ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ನಲ್ಲಿ ಅದೊಂದು ಸ್ಮಾರಕ, ಮಸೀದಿ ಇದೆ. ಅಲ್ಲಿ ಶಮಿ ವೃಕ್ಷ ಇತ್ತು, ಬಹಳ ವರ್ಷದಿಂದ ಪೂಜೆ ಮಾಡ್ತಾ ಇದ್ದರು. ದಸರಾ ಮೆರವಣಿಗೆಗೆ ಹೋಗುವಾಗ ಐದಾರು ಜನ ಮಾತ್ರ ಈ ಹಿಂದೆ ಹೋಗ್ತಾ ಇದ್ದರು. ಆದರೆ, ಈ ವರ್ಷ 25ಕ್ಕೂ ಹೆಚ್ಚು ಜನರು ಹೋಗಿದ್ದಾರೆ. ಅದನ್ನೇ ವಿಡಿಯೋ ಮಾಡಿ ಹೊರಗೆ ಬಿಟ್ಟಿದ್ದಾರೆ ಅಷ್ಟೇ. ಅನಧಿಕೃತವಾಗಿ ನುಗ್ಗಿಲ್ಲ, ದಾಳಿ ಅಂತದ್ದು ಏನೂ ಇಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಎಫ್ಐಆರ್ ಹಾಕಿದ್ದಾರೆ ಎಂದರು.
ಪಿಎಫ್ಐ ಕಾರ್ಯಕರ್ತರ ಬಂಧನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು, ಪಿಎಫ್ಐ ಟ್ರೈನಿಂಗ್ ಕೊಡ್ತಿದ್ದ ಜಾಗದ ಮಾಹಿತಿ ಸಿಕ್ಕಿದೆ. ಸುಳ್ಯ ತಾಲೂಕಿನಲ್ಲಿ ಜಾಗ ಸಿಕ್ಕಿದೆ. ಕೆಲ ಮಾಹಿತಿ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ವರದಿ ವಿಚಾರದಲ್ಲಿ ವರದಿಗೆ ಅಪೀಲ್ ಹೋಗುವುದಾಗಿ ಮೇಸ್ತಾ ತಂದೆ ಹೇಳಿದ್ದಾರೆ. ಮಗನನ್ನ ಕೊಂದು ತಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. ಆ ಪ್ರಕರಣ ಮತ್ತೆ ತನಿಖೆ ಆಗಲಿದೆ ಎಂದು ಹೇಳಿದರು.