ಹಾರ್ಮುಜ್ ಜಲಸಂಧಿಯ ಬಳಿ ಸಾಮಾನ್ಯ ಸರಕುಗಳನ್ನು ಹೊತ್ತೊಯ್ಯುತ್ತಿದ್ದ 18 ಭಾರತೀಯ ಸಿಬ್ಬಂದಿಗಳಿದ್ದ ಮರದ ಹಡಗೊಂದು (Dhow) ಬೆಂಕಿ ಅವಘಡಕ್ಕೀಡಾಗಿ ಮಗುಚಿ ಬಿದ್ದಿದೆ. ಈ ಘಟನೆಯಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದು, ನಾಲ್ವರು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಶುಕ್ರವಾರದಂದು ಈ ಆಯಕಟ್ಟಿನ ಜಲಮಾರ್ಗದ ಬಳಿ ಈ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣವೇನೆಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಇನ್ನು ಪ್ರಯತ್ನಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಉರುಳಿಬಿದ್ದ ನಂತರ, ಹತ್ತಿರದಲ್ಲೇ ಹಾದುಹೋಗುತ್ತಿದ್ದ ಮತ್ತೊಂದು ನೌಕೆಯು ಸಿಬ್ಬಂದಿಗಳನ್ನು ರಕ್ಷಿಸಿದೆ.
”ಈ ಘಟನೆಯಲ್ಲಿ ಹಡಗಿನಲ್ಲಿದ್ದ ಓರ್ವ ಭಾರತೀಯ ಮೃತಪಟ್ಟರೆ, ನಾಲ್ವರು ಸುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ,” ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಸಿಬ್ಬಂದಿಗಳಿಗೆ ಪ್ರಸ್ತುತ ದುಬೈನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ನಂತರ ಭಾರತೀಯ ಕಾನ್ಸುಲರ್ ಅಧಿಕಾರಿಗಳು ರಕ್ಷಿಸಲ್ಪಟ್ಟ ಭಾರತೀಯರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ಸೇರಿಸಿವೆ.
”ನಮ್ಮ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ರಕ್ಷಿಸಲ್ಪಟ್ಟ ಭಾರತೀಯ ಪ್ರಜೆಗಳನ್ನು ನಿನ್ನೆ ರಾತ್ರಿಯೇ ಭೇಟಿ ಮಾಡಿದ್ದಾರೆ. ಕಾನ್ಸುಲೇಟ್ ಹಡಗಿನ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದೆ,” ಎಂದು ಮೂಲಗಳು ಹೇಳಿವೆ.
ಇದಕ್ಕೂ ಮೊದಲು ಗುರುವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈವರೆಗೆ 11 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹೊರಬಂದಿವೆ ಮತ್ತು 13 ಹಡಗುಗಳು ಇನ್ನೂ ಪರ್ಷಿಯನ್ ಕೊಲ್ಲಿಯಲ್ಲಿವೆ ಎಂದು ತಿಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಜೈಸ್ವಾಲ್ ಅವರಿಗೆ, ಅಮೆರಿಕದ ದಿಗ್ಬಂಧನವನ್ನು ತಪ್ಪಿಸಲು ಇರಾನ್ ಹಡಗುಗಳು ಪಾಕಿಸ್ತಾನ ಮತ್ತು ಭಾರತದ ಜಲಪ್ರದೇಶಗಳ ಮೂಲಕ ಸಂಚರಿಸುತ್ತಿರುವ ವರದಿಗಳ ಬಗ್ಗೆ ಮತ್ತು ಇದಕ್ಕೆ ಭಾರತೀಯ ಅಧಿಕಾರಿಗಳಿಂದ ವಿಶೇಷ ಅನುಮತಿಯ ಅಗತ್ಯವಿದೆಯೇ ಎಂಬ ಬಗ್ಗೆ ಪ್ರಶ್ನಿಸಲಾಯಿತು.
”ದಿಗ್ಬಂಧನ ತಪ್ಪಿಸಲು ಇರಾನ್ ಹಡಗುಗಳು ಭಾರತೀಯ ಜಲಪ್ರದೇಶದ ಮಾರ್ಗವನ್ನು ಬಳಸುತ್ತಿವೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ: ಇತರ ದೇಶಗಳ ಹಡಗುಗಳು ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸಲು ಯಾವುದೇ ಅನುಮತಿಯ ಅಗತ್ಯವಿಲ್ಲ. ಆದರೆ, ಭಾರತೀಯ ಜಲಪ್ರದೇಶದ ಒಳಗೆ ಪ್ರವೇಶಿಸುವ ನಿರ್ದಿಷ್ಟ ಪ್ರಶ್ನೆ ತಾಂತ್ರಿಕವಾದುದಾಗಿದ್ದು, ಶಿಪ್ಪಿಂಗ್ ಸಚಿವಾಲಯ ಅಥವಾ ಸಂಬಂಧಿತ ತಾಂತ್ರಿಕ ಅಧಿಕಾರಿಗಳು ಇದಕ್ಕೆ ಉತ್ತರಿಸಬೇಕಾಗುತ್ತದೆ,” ಎಂದು ಜೈಸ್ವಾಲ್ ಹೇಳಿದರು.








