ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತಾದ ಕಾನೂನು ಹೋರಾಟದ ನಡುವೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಮಹಿಳೆಯರ ಘನತೆ ಮತ್ತು ಸಂಪ್ರದಾಯಗಳ ಬಗ್ಗೆ ಅತ್ಯಂತ ಮಹತ್ವದ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಋತುಸ್ರಾವದ ಕಾರಣಕ್ಕೆ ಒಬ್ಬ ಮಹಿಳೆಯನ್ನು ತಿಂಗಳಿಗೆ ಮೂರು ದಿನಗಳ ಕಾಲ ಅಸ್ಪೃಶ್ಯಳಂತೆ ಕಾಣುವುದು ಸಂವಿಧಾನ ಬಾಹಿರ ಮತ್ತು ಅಮಾನವೀಯ,” ಎಂದು ಅವರು ಪ್ರತಿಪಾದಿಸಿದ್ದಾರೆ.
ಶಬರಿಮಲೆ ಪ್ರಕರಣದ ಮರುಪರಿಶೀಲನಾ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿ ಸಹಜವಾದ ಋತುಸ್ರಾವದ ಪ್ರಕ್ರಿಯೆಯನ್ನು ಅಶುದ್ಧ ಎಂದು ಪರಿಗಣಿಸಿ ಮಹಿಳೆಯರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಸಂವಿಧಾನದ ವಿಧಿ 17ರ ಅಡಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಇದನ್ನು ಕೇವಲ ಜಾತಿಯ ಆಧಾರದ ಮೇಲೆ ಮಾತ್ರವಲ್ಲದೆ, ಲಿಂಗದ ಆಧಾರದ ಮೇಲೂ ನೋಡಬೇಕಿದೆ. ಮಹಿಳೆಯರಿಗೆ ಕೆಲವು ದಿನಗಳ ಕಾಲ ದೇವಸ್ಥಾನ ಪ್ರವೇಶ ನಿರಾಕರಿಸುವುದು ಒಂದು ರೀತಿಯ ‘ಅಸ್ಪೃಶ್ಯತೆ’ಯೇ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಋತುಸ್ರಾವ ಎಂಬುದು ಸೃಷ್ಟಿಯ ಒಂದು ಭಾಗ ಮತ್ತು ತಾಯ್ತನದ ಮೂಲವಾಗಿದೆ. ಇದನ್ನು ಅಪವಿತ್ರ ಎಂದು ಕರೆಯುವುದು ಮಹಿಳೆಯ ಅಸ್ತಿತ್ವವನ್ನೇ ಅವಮಾನಿಸಿದಂತೆ,” ಎಂದು ಜಸ್ಟಿಸ್ ನಾಗರತ್ನ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.ಧಾರ್ಮಿಕ ನಂಬಿಕೆಗಳು ಮುಖ್ಯವಾಗಿದ್ದರೂ, ಅವು ವ್ಯಕ್ತಿಯ ಮೂಲಭೂತ ಹಕ್ಕುಗಳು ಮತ್ತು ಘನತೆಗೆ ಧಕ್ಕೆ ತರುವಂತಿರಬಾರದು ಎಂಬುದು ಅವರ ವಾದದ ಸಾರವಾಗಿತ್ತು.








