ನವದೆಹಲಿ: ತನ್ನ ದೇಶದ ಆಂತರಿಕ ಬಿಕ್ಕಟ್ಟುಗಳನ್ನು ಬಗೆಹರಿಸಲಾಗದ ಪಾಕಿಸ್ತಾನ, ಈಗ ಭಾರತದ ಮೇಲೆ ದಾಳಿ ಮಾಡುವ ದರ್ಪದ ಮಾತುಗಳನ್ನಾಡಿದೆ. ಪಾಕಿಸ್ತಾನದ ರಕ್ಷಣಾ ಸಚಿವರು ಭಾರತದ ಪ್ರಮುಖ ನಗರವಾದ ‘ಕೋಲ್ಕತ್ತಾ’ ಮೇಲೆ ದಾಳಿ ನಡೆಸುವ ಸಾಮರ್ಥ್ಯ ತಮಗಿದೆ ಎಂದು ಹೇಳುವ ಮೂಲಕ ನೇರ ಯುದ್ಧದ ಬೆದರಿಕೆ ಒಡ್ಡಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಪಾಕ್ ರಕ್ಷಣಾ ಸಚಿವರು, “ನಮ್ಮ ಕ್ಷಿಪಣಿಗಳು ಕೇವಲ ದೆಹಲಿಯನ್ನಷ್ಟೇ ಅಲ್ಲ, ಭಾರತದ ಪೂರ್ವ ತುದಿಯಲ್ಲಿರುವ ಕೋಲ್ಕತ್ತಾವನ್ನು ತಲುಪುವ ಸಾಮರ್ಥ್ಯ ಹೊಂದಿವೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಬಳಿ ಇರುವ ‘ಶಾಹೀನ್’ ಮತ್ತು ‘ಘೋರಿ’ಯಂತಹ ಕ್ಷಿಪಣಿಗಳು ಭಾರತದಾದ್ಯಂತ ದಾಳಿ ನಡೆಸಬಲ್ಲವು ಎಂದು ಅವರು ಜಂಬ ಕೊಚ್ಚಿಕೊಂಡಿದ್ದಾರೆ.ಪಾಕಿಸ್ತಾನದ ಈ ಹೇಳಿಕೆಗೆ ಭಾರತದ ರಕ್ಷಣಾ ಇಲಾಖೆಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. “ಪಾಕಿಸ್ತಾನ ಮೊದಲು ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲಿ. ಭಾರತದ ಮೇಲೆ ಕೈಹಾಕುವ ಮೊದಲು ತನ್ನ ಅಸ್ತಿತ್ವದ ಬಗ್ಗೆ ಯೋಚಿಸಲಿ” ಎಂದು ಭಾರತೀಯ ಅಧಿಕಾರಿಗಳು ಎಚ್ಚರಿಸಿದ್ದಾರೆ.








