ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ ನ್ಯಾಯಾಂಗದ ಕುರಿತಾದ ವಿವಾದಾತ್ಮಕ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರವೂ ತನ್ನ ಟೀಕೆಯನ್ನು ಮುಂದುವರಿಸಿದೆ.
ಕೇವಲ ಕ್ಷಮೆಯಾಚನೆ ಮಾತ್ರ ಸಾಲದು ಎಂದು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ಈ ತಪ್ಪಿಗೆ ಕಾರಣರಾದವರ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಕುರಿತಾದ ಉಲ್ಲೇಖಗಳು ನ್ಯಾಯಾಂಗವನ್ನು ದೂಷಿಸುವ ಉದ್ದೇಶ ಹೊಂದಿದ್ದವು ಎಂದು ಪುನರುಚ್ಚರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು, ಈ ತಪ್ಪಿಗೆ ಕಾರಣರಾದವರನ್ನು ಪತ್ತೆಹಚ್ಚುವವರೆಗೆ ಈ ಪ್ರಕರಣವನ್ನು ಮುಕ್ತಾಯಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.
’ಬಾರ್ ಅಂಡ್ ಬೆಂಚ್’ ವರದಿಯ ಪ್ರಕಾರ, ಸಿಜೆಐ ಸೂರ್ಯ ಕಾಂತ್ ಅವರು, “ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಡಾ. ದಿನೇಶ್ ಪ್ರಸಾದ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುತ್ತೇವೆ… ಈ ಆಕ್ಷೇಪಾರ್ಹ ಅಧ್ಯಾಯಗಳ ಹಿಂದೆ ಇರುವವರ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ ಅಥವಾ ಇತರ ಯಾವುದೇ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮವನ್ನು ಏಕೆ ಜರುಗಿಸಬಾರದು?” ಎಂದು ಪ್ರಶ್ನಿಸಿದ್ದಾರೆ.
”ಸಂಸ್ಥೆಯ ಅಧಿಕಾರವನ್ನು ಕುಂದಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಕೆಳಮಟ್ಟಕ್ಕಿಳಿಸಲು ಇದು ಒಂದು ವ್ಯವಸ್ಥಿತ ಸಂಚು ಎಂದು ನಮಗೆ ಅನ್ನಿಸುತ್ತಿದೆ. ಇದನ್ನು ಹೀಗೇ ಬಿಟ್ಟರೆ, ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಯುವ ಮನಸ್ಸುಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಪವಿತ್ರತೆಯ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ,” ಎಂದು ಅವರು ತಿಳಿಸಿದ್ದಾರೆ.
ಈ ಅಧ್ಯಾಯವನ್ನು ಸಮರ್ಥಿಸಿಕೊಳ್ಳಲು ಪುಸ್ತಕದಲ್ಲಿ ಮಾಜಿ ಸಿಜೆಐ ಬಿ.ಆರ್. ಗವಾಯಿ ಅವರ ಭಾಷಣದ ಒಂದು ಭಾಗವನ್ನು ಬಳಸಲಾಗಿದೆ ಎಂದು ಬೆಟ್ಟು ಮಾಡಿದ ಅವರು, ಆದರೆ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲು ಇಷ್ಟು ವರ್ಷಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಎನ್ಸಿಇಆರ್ಟಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.








