ನವದೆಹಲಿ:ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದ್ದು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಭಾರತಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಗಡಿ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆ ಮಾತನಾಡಿರುವ ಅವರು, “ಅಗತ್ಯ ಬಿದ್ದರೆ ಭಾರತದೊಳಗೆ ನುಗ್ಗಿ ಆರ್ಎಸ್ಎಸ್ (RSS) ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲು ನಾವು ಹಿಂಜರಿಯುವುದಿಲ್ಲ” ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಅಪ್ರಚೋದಿತವಾಗಿ ಭಾರತದ ವಿರುದ್ಧ ಕಿಡಿಕಾರಿದ ಪಾಕ್ ಸಚಿವ, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಈ ದಾಳಿಯ ಬೆದರಿಕೆ ಹಾಕಿದ್ದಾರೆ.
ಅಣ್ವಸ್ತ್ರ ಯುದ್ಧದ ಭೀತಿ: “ಎರಡು ಪರಮಾಣು ರಾಷ್ಟ್ರಗಳ ನಡುವಿನ ಯುದ್ಧವು ವಿನಾಶಕಾರಿಯಾಗಲಿದೆ. ಭಾರತವು ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಮುಂದಿನ ಬಾರಿ ನಮ್ಮ ಪ್ರತಿಕ್ರಿಯೆ ‘ಮಾರ್ಕಾ-ಎ-ಹಕ್’ (Marka-e-Haq) ಕಾರ್ಯಾಚರಣೆಗಿಂತಲೂ ಭೀಕರವಾಗಿರಲಿದೆ,” ಎಂದು ಆಸಿಫ್ ಗುಡುಗಿದ್ದಾರೆ.
ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ಸಂಚು ರೂಪಿಸಿರುವ ಪಾಕಿಸ್ತಾನ, ನೇರವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶಿಬಿರಗಳನ್ನು ಗುರಿಯಾಗಿಸುವುದಾಗಿ ಹೇಳಿರುವುದು ಭಾರತೀಯ ಭದ್ರತಾ ಏಜೆನ್ಸಿಗಳ ಗಮನ ಸೆಳೆದಿದೆ.
ಈ ಹೇಳಿಕೆಯ ಬೆನ್ನಲ್ಲೇ ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ಗಡಿ ಭಾಗದಲ್ಲಿ ಭಾರತೀಯ ಸೇನೆಯು ಹೈ-ಅಲರ್ಟ್ ಘೋಷಿಸಿದ್ದು, ಶತ್ರುಗಳ ಯಾವುದೇ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡಲು ಸನ್ನದ್ಧವಾಗಿದೆ.








