ಕಾರವಾರ: ಕುಡಿವ ನೀರಿನ ಕೊರತೆ ನೀಗಿಸಲು ಶಿರಸಿಯ ಗೌರಿ ನಾಯ್ಕ ಮತ್ತೊಮ್ಮೆ ಏಕಾಂಗಿ ಸಾಹಸ ಮಾಡಿದ್ದು, ಈ ನಡುವೆ ಅವರು ಯಶಸ್ಸ ಅನ್ನು ಕೂಡ ಪಡೆದುಕೊಂಡಿದ್ದಾರೆ.
ಇಲ್ಲಿನ ಗಣೇಶನಗರದ ಅಂಗನವಾಡಿ ಮಕ್ಕಳಿಗೆ ನೀರಿಲ್ಲ. ಜೊತೆಗೆ ಆಸುಪಾಸಿನ ಮನೆಗಳಲ್ಲೂ ನೀರಿಗೆ ತತ್ವಾರ ಉಂಟಾಗಿತ್ತು, ಈ ನಡುವೆ ಸ್ವಪ್ರೇರಣೆಯಿಂದ ಗುದ್ದಲಿ, ಹಾರೆ ಹಿಡಿದುಕೊಂಡು ಬಾವಿ ತೋಡಿದ್ದಾರೆ. ಬಾವಿ ತೋಡುತ್ತಿರುವ ಜಲ ಸಾಧಕಿ ಗೌರಿ ನಾಯ್ಕ ಅವರ ಮುಖದಲ್ಲಿ ಬುಧವಾರ ಮಂದಹಾಸ ಮೂಡಿದೆ. ಕಳೆದ 10 ದಿನಗಳಿಂದ ಹಗಲಿಡೀ ದುಡಿದ ಪರಿಣಾಮ ಬಾವಿ ಸುಮಾರು 8 ಅಡಿ ಆಳ ತಲುಪಿದ್ದು, ಈಗ ಕೆಂಪನೆಯ ಮತ್ತು ತಂಪನೆಯ ಮಣ್ಣು ಲಭಿಸುತ್ತಿದೆ. ಜಲ ಸಮೀಪದಲ್ಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಈ ಬಾವಿ ಪೂರ್ಣಗೊಳಿಸಲು ಒಂದು ತಿಂಗಳು ಬೇಕಾಗಬಹುದು ಎಂದು ಮೊದಲು ಅಂದಾಜಿಸಿದ್ದೆ. ಬುಧವಾರ ತಂಪನೆಯ ಮಣ್ಣು ಲಭಿಸುತ್ತಿರುವುದರಿಂದ ಇನ್ನು ಹದಿನೈದು ದಿನಗಳು ಭಾವಿ ಕೆಲಸ ಪೂರ್ಣಗೊಳಿಸಲು ಸಾಕಾಗಬಹುದು ಎನ್ನುತ್ತಾರೆ ಗೌರಿ.