ಪ್ರಯಾಗ್ರಾಜ್: “ತಾಯಿಯ ಗರ್ಭದಲ್ಲಿರುವ ಐದು ತಿಂಗಳು ಮೀರಿದ ಭ್ರೂಣವನ್ನು ಜೀವಂತ ಮಗುವಿಗೆ ಸಮಾನವೆಂದು ಪರಿಗಣಿಸಬಹುದು. ಗರ್ಭಸ್ಥ ಶಿಶುವು ಕಾನೂನಿನ ದೃಷ್ಟಿಯಲ್ಲಿ ಒಬ್ಬ ‘ವ್ಯಕ್ತಿ’ಯಾಗಿದ್ದು, ಅಪಘಾತದಲ್ಲಿ ಅದರ ಸಾವು ಸಂಭವಿಸಿದರೆ ಪ್ರತ್ಯೇಕ ಪರಿಹಾರ ನೀಡಬೇಕು” ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರೈಲು ಅಪಘಾತವೊಂದರಲ್ಲಿ ಮೃತಪಟ್ಟ ಗರ್ಭಿಣಿಯ ಕುಟುಂಬಕ್ಕೆ ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ಸಾವಿಗೂ ಪ್ರತ್ಯೇಕವಾಗಿ 8 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯವು ಭಾರತೀಯ ರೈಲ್ವೆಗೆ ಸೂಚಿಸಿದೆ.
ಭಾನುಮತಿ ಎಂಬ ಗರ್ಭಿಣಿ ಮಹಿಳೆ 2018ರಲ್ಲಿ ಮರುಧರ್ ಎಕ್ಸ್ಪ್ರೆಸ್ ರೈಲು ಹತ್ತುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು. ಆ ಸಮಯದಲ್ಲಿ ಅವರು 8-9 ತಿಂಗಳ ಗರ್ಭಿಣಿಯಾಗಿದ್ದರು. ಅಪಘಾತದಲ್ಲಿ ತಾಯಿ ಮತ್ತು ಗರ್ಭದಲ್ಲಿದ್ದ ಗಂಡು ಮಗು ಇಬ್ಬರೂ ಮೃತಪಟ್ಟಿದ್ದರು.
ಈ ಹಿಂದೆ ರೈಲ್ವೆ ಹಕ್ಕುಗಳ ನ್ಯಾಯಮಂಡಳಿಯು (Tribunal) ಕೇವಲ ತಾಯಿಯ ಸಾವಿಗೆ 8 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಆದರೆ ಗರ್ಭದಲ್ಲಿದ್ದ ಮಗುವಿನ ಸಾವನ್ನು ಸ್ವತಂತ್ರ ಸಾವು ಎಂದು ಪರಿಗಣಿಸಿರಲಿಲ್ಲ.ಮಗುವಿನ ಸಾವಿಗೂ ಪರಿಹಾರ ಬೇಕೆಂದು ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರ ಪೀಠವು, “ಗರ್ಭದಲ್ಲಿರುವ ಶಿಶುವು ಕೇವಲ ತಾಯಿಯ ದೇಹದ ಭಾಗವಲ್ಲ, ಅದು ಒಂದು ಸ್ವತಂತ್ರ ಜೀವ. 5 ತಿಂಗಳು ಮೀರಿದ ಭ್ರೂಣಕ್ಕೆ ತನ್ನದೇ ಆದ ಹಕ್ಕುಗಳಿರುತ್ತವೆ” ಎಂದು ಅಭಿಪ್ರಾಯಪಟ್ಟಿದೆ. “ಒಂದು ವೇಳೆ ಅಪಘಾತ ಸಂಭವಿಸದಿದ್ದರೆ, ಆ ಮಗು ಜನ್ಮ ಪಡೆದು ಈ ಜಗತ್ತನ್ನು ನೋಡುತ್ತಿತ್ತು. ಆದ್ದರಿಂದ ಭ್ರೂಣದ ನಾಶವನ್ನು ಮಗುವಿನ ಸಾವು ಎಂದೇ ಪರಿಗಣಿಸಬೇಕು” ಎಂದು ಕೋರ್ಟ್ ಹೇಳಿದೆ.
ತಾಯಿಯ ಸಾವಿಗೆ ನೀಡಲಾದ 8 ಲಕ್ಷ ರೂಪಾಯಿಗಳ ಜೊತೆಗೆ, ಮಗುವಿನ ಸಾವಿಗೆ ಪ್ರತ್ಯೇಕವಾಗಿ ಮತ್ತೆ 8 ಲಕ್ಷ ರೂಪಾಯಿಗಳನ್ನು (ಒಟ್ಟು 16 ಲಕ್ಷ ರೂ.) ಅರ್ಜಿದಾರರಿಗೆ ನೀಡುವಂತೆ ರೈಲ್ವೆ ಇಲಾಖೆಗೆ ಆದೇಶಿಸಲಾಗಿದೆ.








