ಬೆಂಗಳೂರು: ನೆರೆ ಹೊರೆ ರಾಜ್ಯಗಳ ಉತ್ತಮ ಬಾಂಧವ್ಯಕ್ಕೆ ಪಕ್ಷ ರಾಜಕೀಯ ಅಡ್ಡಿ ಬರುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದ ಪೂರ್ವದ್ವಾರದಲ್ಲಿಂದು ಆಂಧ್ರಪ್ರದೇಶಕ್ಕೆ 4 ಆನೆಗಳನ್ನು ಹಸ್ತಾಂತರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯಕ್ಕೆ ಇಂದಿನ ಈ ಆನೆಗಳ ಹಸ್ತಾಂತರ ಸಹಕಾರಿಯಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯಲ್ಲಿಯೂ ಗಣನೀಯ ಸುಧಾರಣೆ ತರಲಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಲು ಮರ ಬೆಳೆಸುವುದೊಂದೇ ಪರಿಹಾರ ಎಂಬುದನ್ನು ಮನಗಂಡು ಕಳೆದ 2 ವರ್ಷದಲ್ಲಿ 8.5 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ಇವುಗಳಲ್ಲಿ ಎಷ್ಟು ಬದುಕಿ ಉಳಿದಿವೆ ಎಂಬುದನ್ನು ಆಡಿಟ್ ಮಾಡಿಸಿ ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದರು.
ಅರಣ್ಯ ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪಕ್ಷಿ ಸಂಕುಲದ ಉಳಿವಿಗಾಗಿ ಅವುಗಳ ಸಂತಾನೋತ್ಪತ್ತಿಯ ತಾಣವಾದ ಬೆಂಗಳೂರು ನಗರದ ಹೆಸರಘಟ್ಟ ಕೆರೆ ಮತ್ತು ಸುತ್ತಮುತ್ತಲಿನ ಅಪರೂಪದ ಹುಲ್ಲುಗಾವಲನ್ನು ಸಂರಕ್ಷಿಸಲು 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಹಸಿರು ಹೊದಿಕೆ ಹೆಚ್ಚಿಸಲು ಕಳೆದ 2 ವರ್ಷದ ಅವಧಿಯಲ್ಲಿ 15,000 ಎಕರೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಅಧಿಸೂಚಿತ ಅರಣ್ಯವೆಂದು ಘೋಷಿಸಲಾಗಿದೆ. ಅರಣ್ಯ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಚಿತಪಡಿಸಲು ಗರುಡಾಕ್ಷಿ ಎಂಬ ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಶತಮಾನಗಳ ಹಿಂದೆ ಬೆಂಗಳೂರಿನಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ನಿರ್ಮಾಣವಾಗಿತ್ತು. ಆದಾದ ನಂತರ ಅಂತಹ ಬೃಹತ್ ಉದ್ಯಾನ ಮತ್ತೊಂದು ನಿರ್ಮಾಣ ಆಗಿರಲಿಲ್ಲ. ಉದ್ಯಾನ ನಗರಿ ಎಂಬ ಬೆಂಗಳೂರು ಖ್ಯಾತಿ ಉಳಿಸಲು ಯಲಹಂಕ ಬಳಿಯ ಮಾದಪ್ಪನ ಹಳ್ಳಿಯ 153 ಎಕರೆ ಪ್ರದೇಶದಲ್ಲಿ ಬೃಹತ್ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲಾಗಿದೆ ಎಂದ ಈಶ್ವರ ಖಂಡ್ರೆ, ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಮಾನವ-ಆನೆ ಸಂಘರ್ಷದಿಂದ ಹೆಚ್ಚಿನ ಸಾವು ನೋವು ಸಂಭವಿಸುತ್ತಿದ್ದು, ಜನರ ಅಮೂಲ್ಯ ಜೀವ ಮತ್ತು ಬೆಳೆ ಉಳಿಸಲು 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕಳೆದ 2 ವರ್ಷದಲ್ಲಿ 115.085 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 102.5 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.
ಪವನ್ ಕಲ್ಯಾಣ್ ಅವರು 2024ರ ಆಗಸ್ಟ್ ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಮತ್ತು ವಿಜಯವಾಡಕ್ಕೆ ತಮ್ಮ ನೇತೃತ್ವದ ನಿಯೋಗ ತೆರಳಿದ್ದ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕವನ ವಾಚಿಸಿದ್ದರು, ನಮ್ಮ ಎರಡೂ ರಾಜ್ಯಗಳ ನಡುವಿನ ಹಲವು ಶತಮಾನಗಳ ಬಾಂಧವ್ಯಕ್ಕೆ ಪುಷ್ಟಿ ನೀಡಿದ್ದರು ಎಂದರು.
ಆನೆಗಳಿಗೆ ಪೂಜೆ:
ದಸರಾ ಆನೆಗಳು ವೀರನಹೊಸಹಳ್ಳಿಯಿಂದ ಮೈಸೂರಿಗೆ ಬರುವಾಗ ಪೂಜೆ ಮಾಡಿ ಕಳಿಸುವ ರೀತಿಯಲ್ಲೇ ರಾಜ್ಯದಿಂದ ಆಂಧ್ರಕ್ಕೆ ನೀಡುತ್ತಿರುವ ಆನೆಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ. ಇದು ಆನೆಗಳ ಬಗ್ಗೆ ಕರ್ನಾಟಕ ರಾಜ್ಯಕ್ಕೆ ಇರುವ ಪ್ರೀತಿ, ವಾತ್ಸಲ್ಯದ ಧ್ಯೋತಕವಾಗಿದೆ ಎಂದರು.
ಆನೆಗಳ ಆರೋಗ್ಯದ ಬಗ್ಗೆ ವಾರ್ಷಿಕ ವರದಿ:
ಆಂಧ್ರಪ್ರದೇಶಕ್ಕೆ ನೀಡಲಾಗಿರುವ ಆನೆಗಳ ಆರೋಗ್ಯದ ಬಗ್ಗೆ ಪ್ರತಿ ವರ್ಷ ವರದಿ ತರಿಸಿಕೊಳ್ಳಲಾಗುವುದು. ಈ ಅಂಶವನ್ನು ಆನೆ ಹಸ್ತಾಂತರ ಕುರಿತ ಒಪ್ಪಂದದಲ್ಲೂ ಸೇರಿಸಲಾಗಿದೆ. ಪವನ್ ಕಲ್ಯಾಣ್ ಅವರು ಆನೆಗಳನ್ನು ಮುತುವರ್ಜಿಯಿಂದ ಕಾಪಾಡುವ ಭರವಸೆ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಸುಧಾಕರ್, ರಹೀಂ ಖಾನ್, ಬೈರತಿ ಸುರೇಶ್, ಶಾಸಕರುಗಳಾದ ರಿಜ್ವಾನ್ ಅರ್ಷದ್, ಕೋನರೆಡ್ಡಿ, ಪೊನ್ನಣ್ಣ ಮತ್ತಿತರರು ಆನೆಗೆ ಪೂಜೆ ಸಲ್ಲಿಸಿ ಆನೆಗಳನ್ನು ಹಸ್ತಾಂತರಿಸಿದರು.
ಆಂಧ್ರಪ್ರದೇಶಕ್ಕೆ ನೀಡಲಾದ ಆನೆಗಳ ವಿವರ:
1. ಕೃಷ್ಣ 15 ವರ್ಷ. 2022ರಲ್ಲಿ ಚಿಕ್ಕಮಗಳೂರಿನಲ್ಲಿ ಈ ಆನೆ ಸೆರೆ ಹಿಡಿಯಲಾಗಿತ್ತು.
2. ಶಿವಮೊಗ್ಗ ಅಭಿಮನ್ಯು- 14 ವರ್ಷ 2023ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾದ ಆನೆ.
3. ದೇವ -39 ವರ್ಷ ಕುಶಾಲನಗರದಲ್ಲಿ 2019ರಲ್ಲಿ ಸೆರೆ ಹಿಡಿದ ಆನೆ.
4. ರಂಜನ್ ದುಬಾರೆ ಶಿಬಿರದಲ್ಲೇ ಜನಿಸಿದ ಆನೆ. ವಯಸ್ಸು 26 ವರ್ಷ.
ಆಂಧ್ರಪ್ರದೇಶ ಒಟ್ಟು 8 ಆನೆ ನೀಡುವಂತೆ ಮನವಿ ಮಾಡಿದ್ದು, ಕರ್ನಾಟಕ 6 ಆನೆ ನೀಡಲು ಸಮ್ಮತಿಸಿದೆ. ಇಂದು 4 ಆನೆಗಳನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಲಾಗಿದೆ.
ತೆಲುಗು ಸಾಲು ವಾಚಿಸಿದ ಈಶ್ವರ ಖಂಡ್ರೆ
ಪ್ರಕೃತಿ, ಅದ್ದಂ ರಂಡೂ ಒಕಟೇ, ಅದ್ದಂ ನುವ್ವಲಾಗವುಂಟೆ ಅಲಾಗೇ ಚೂಪಿಸ್ತುಂದಿ, ಪ್ರಕೃತಿ ನುವ್ವು ದಾನ್ನೆಂತ ಕಾಪಾಡಿತೆ ಅದಿ ನಿನ್ನಂತೆ ಕಾಪಾಡುತುಂದಿ…
ಇದರ ಅರ್ಥ, “ಪ್ರಕೃತಿ – ಕನ್ನಡಿ, ಎರಡೂ ಒಂದೇ. ಕನ್ನಡಿ ಇರುವ ರೂಪವನ್ನೇ ನಿಮಗೆ ತೋರಿಸುತ್ತದೆ. ನೀವು ಪ್ರಕೃತಿ ರಕ್ಷಿಸಿದ ರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ.” ಸಂಸ್ಕೃತದಲ್ಲಿ ವೃಕ್ಷೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ನಾವು ಮರ ರಕ್ಷಿಸದರೆ ಮರ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಾವೆಲ್ಲರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ ಎಂದರು.
ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು, 3695 ಆನೆಗಳು ನಮ್ಮಲ್ಲಿವೆ: ಸಿಎಂ ಸಿದ್ಧರಾಮಯ್ಯ