ಬೆಂಗಳೂರು: ದಿಢೀರ್ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ಜಾರಿಗೆ ತಂದಂತ ಯೋಜನೆಯಲ್ಲಿ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯೂ ಒಂದಾಗಿದೆ. ಇಂದಿನ ವಿಶ್ವ ಹೃದಯ ದಿನದಂದು ಮಹತ್ವದ ವಿಚಾರ ಎನ್ನುವಂತೆ ಈ ಯೋಜನೆಯಡಿ 240 ಜನರ ಬಾಳಿಗೆ ಬೆಳಕಾಗಿದೆ.
ಹೌದು ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯ ಅಡಿಯಲ್ಲಿ 7 ತಿಂಗಳಲ್ಲಿ ಗೋಲ್ಡನ್ ಹವರ್ ನಲ್ಲಿ 240 ಜೀವಗಳನ್ನು ರಕ್ಷಣೆ ಮಾಡುವ ಮೂಲಕ ಹೊಸ ದಾಖಲೆಯನ್ನೇ ರಾಜ್ಯ ಸರ್ಕಾರದ ಯೋಜನೆ ಬರೆದಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿದಂತ ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯ 2ನೇ ಹಂತಕ್ಕೆ ಮಾ.20, 2024ರಂದು ಚಾಲನೆ ನೀಡಿದ ನಂತ್ರ ಜೀವ ರಕ್ಷಕವಾಗಿರುವ ಟೆನೆಕ್ಷಪ್ಲೆಸ್ ಇಂಜೆಕ್ಷನ್ ಒದಗಿಸಲಾಗುತ್ತಿದೆ. 25 ಸಾವಿರ ರೂಪಾಯಿ ಮೊತ್ತದ ಚುಚ್ಚುಮದ್ದು ಹೃದಯಾಘಾತಕ್ಕೆ ಒಳಗಾದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ರೋಗಿಯ ಹೃದಯ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತ ತಿಳಿಗೊಂಡು, ಎದೆನೋವು ಕಡಿಮೆಯಾಗಿ ಪ್ರಾಣಾಪಾಯ ತಪ್ಪಲಿದೆ. ಆ ಬಳಿಕ ರೋಗಿಯನ್ನು ಹಬ್ ಕೇಂದ್ರಗಳಿಗೆ ರವಾನಿಸಿ, ಹೆಚ್ಚಿನ ಚಿಕಿತ್ಸೆ ಒದಗಿಸಲಾಗುತ್ತಿದೆ.
ಏನಿದು ಹೃದಯ ಜ್ಯೋತಿ ಯೋಜನೆ
ಎದೆನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ ಎಐ ತಂತ್ರಜ್ಞಾನ ಬಳಸಿ ಕೇವಲ 5 ನಿಮಿಷದೊಗಳಗೆ ರೋಗಿಯ ಹೃದಯ ಆರೋಗ್ಯ ಸ್ಥಿತಿಯನ್ನು ಪತ್ತೆಹಚ್ಚಲಾಗುವುದು. ಅಂದರೇ ರೋಗಿ ಆಸ್ಪತ್ರೆಗೆ ಬಂದ ಕೂಡಲೇ ಇಸಿಜಿ ಪರೀಕ್ಷೆ ನಡೆಸಿ, ಅದನ್ನು ಹಬ್ ಕೇಂದ್ರಗಳಿಗೆ ರವಾನಿಸಲಾಗುವುದು. ವರದಿ ಆಧರಿಸಿ ತಜ್ಞರ ಸೂಚನೆ ಮೇರೆಗೆ ರೋಗಿಗೆ ಇಂಜೆಕ್ಷನ್ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ಈ ಮೂಲಕ ಗೋಲ್ಡನ್ ಹವರ್ ನಲ್ಲಿ ಹೃದಯ ರೋಗಿಯನ್ನು ಚಿಕಿತ್ಸೆ ಮಾಡುವ ಕೆಲಸ ಈ ಯೋಜನೆಯಡಿ ನಡೆಯಲಿದೆ.
ಅಂದಹಾಗೇ ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯು 86 ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗೆ ಲಭ್ಯವಿದೆ. ರಾಜ್ಯಾಧ್ಯಂತ 16 ಜಿಲ್ಲೆ ಹಾಗೂ 70 ತಾಲ್ಲೂಕು ಸೇರಿದಂತೆ 86 ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಸೇರಿದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಇಲ್ಲಿ ತೃತೀಯ ಹಂತದ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಲಾಗುತ್ತಿದೆ.
BIG NEWS: ಕರ್ನಾಟಕದಲ್ಲಿ ನೂರಾರು ರೈತರ ಆತ್ಮಹತ್ಯೆ: ಪ್ರಧಾನಿ ಮೋದಿ ಗಂಭೀರ ಆರೋಪ
ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ ಸೇರಿದ 11 ಕಡೆ ‘SIT’ ದಾಳಿ, ಮಹತ್ವದ ದಾಖಲೆ ವಶಕ್ಕೆ