ಬೆಂಗಳೂರು: ಕ್ರಿಮಿನಲ್ ಪ್ರಕರಣಗಳನ್ನು ಸಿಐಡಿಗೆ ತನಿಖೆಗಾಗಿ ವರ್ಗಾಯಿಸಿದಾಗ ಈ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಡೈರೆಕ್ಟರ್ ಜನರಲ್ ಮುತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಆದೇಶ ಹೊರಡಿಸಿದ್ದು, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿಐಡಿಯು ಪ್ರಮುಖ ಅಪರಾಧ ತನಿಖಾ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯಿಂದ ಪ್ರಕರಣಗಳನ್ನು ತನಿಖೆಗಾಗಿ ಕರ್ನಾಟಕ ಸರ್ಕಾರ, ಸರ್ವೋಚ್ಛ ನ್ಯಾಯಾಲಯ ಅಥವಾ ಡಿಜಿ&ಐಜಿಪಿ ಕಛೇರಿಯಿಂದ ಆದೇಶವಾದ ಉಚ್ಛನ್ಯಾಯಾಲಯಗಳು ಅಥವಾ ಪರಿಣಾಮವಾಗಿ ವರ್ಗಾವಣೆಗೊಳ್ಳುತ್ತವೆ. ಈ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಸಿಐಡಿಗೆ ಪ್ರಕರಣದ ತನಿಖೆಯು ವರ್ಗಾವಣೆಯಾದಾಗ ಸ್ಥಳೀಯ ಹಾಗೂ ಸಿಐಡಿ ತನಿಖಾಧಿಕಾರಿಗಳು ಈ ಕೆಳಗಿನ ಕಾರ್ಯವಿಧಾನಗಳನ್ನು ತಪ್ಪದೇ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.
ಸ್ಥಳೀಯ ತನಿಖಾಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯವಿಧಾನಗಳು:-
1) ತಮ್ಮ ಘಟಕದಲ್ಲಿ ದಾಖಲಾಗಿ ತನಿಖೆಯಲ್ಲಿರುವ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದರ ಬಗ್ಗೆ ಪೊಲೀಸ್ ಪ್ರಧಾನ ಕಛೇರಿಯಿಂದ ಸೂಚನೆ ಅಥವಾ ಆದೇಶ ಸ್ವೀಕರಿಸಿದ ಘಟಕದ ಮುಖ್ಯಸ್ಥರು, ಕೂಡಲೇ ಸಂಬಂಧಿಸಿದ ತನಿಖಾಧಿಕಾರಿಗಳಿಗೆ ಮಾಹಿತಿ ನೀಡತಕ್ಕದ್ದು. ಜೊತೆಗೆ ಆ ತನಿಖಾಧಿಕಾರಿಗೆ ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷಾಧಾರಗಳನ್ನು ಹಾಗೂ ಕಂಡುಕೊಂಡ ಸಂಗತಿಗಳನ್ನು ಕ್ರಮ ಪಟ್ಟಿಯಲ್ಲಿ 3 ದಿನಗಳೊಳಗಾಗಿ ತನ್ನ ಪರಿಶೀಲನೆಗಾಗಿ ಸಲ್ಲಿಸಲು ಸೂಚಿಸತಕ್ಕದ್ದು.
2) ಸ್ಥಳೀಯ ತನಿಖಾಧಿಕಾರಿಗಳು ತನ್ನ ಘಟಕದ ಮುಖ್ಯಸ್ಥರಿಂದ ಸೂಚನೆ ಮತ್ತು ಆದೇಶಗಳನ್ನು ಸ್ವೀಕರಿಸಿದ ತಕ್ಷಣ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
• ಪ್ರಕರಣದ ಕೇಸ್ ಡೈರಿಯನ್ನು ದಿನಾಂಕ ಪ್ರಕಾರವಾಗಿ Update ಮಾಡುವುದು.
• ಪೊಲೀಸ್ ಐಟಿ ತನಿಖೆಯ ಕ್ರಮಗಳನ್ನು Update ಮಾಡುವುದು.
• ಬಾಕಿ ಇರುವ ತನಿಖಾಕ್ರಮ ಮತ್ತು ವಿಷಯಗಳನ್ನು ಪಟ್ಟಿ ಮಾಡುವುದು.
3) ಸ್ಥಳೀಯ ತನಿಖಾಧಿಕಾರಿಗಳು ತನಿಖಾ ಕಡತವನ್ನು ಪರಿವಿಡಿಯೊಂದಿಗೆ ಕ್ರಮಬದ್ಧವಾಗಿ ಪುಟಸಂಖ್ಯೆ ನೀಡಿ ಕಡತವನ್ನು ಸಿದ್ಧ ಮಾಡಿಕೊಳ್ಳತಕ್ಕದ್ದು.
4) ಸ್ಥಳೀಯ ತನಿಖಾಧಿಕಾರಿಗಳು, ಕಾಲಾನುಸಾರ ತನ್ನ ಹಿಂದಿನ ತನಿಖಾಧಿಕಾರಿ ಹಾಗೂ ತಾನು ಕೈಗೊಂಡ ತನಿಖೆ ಕುರಿತಂತೆ ಮತ್ತು ಬಾಕಿ ಇರುವ ತನಿಖೆ ಕ್ರಮ ಮತ್ತು ವಿಷಯಗಳನ್ನು ಒಳಗೊಂಡ ಒಂದು ವರದಿಯನ್ನು ಸಿದ್ಧಪಡಿಸಿಕೊಂಡು ತನ್ನ ಘಟಕದ ಮುಖ್ಯಸ್ಥರಿಗೆ ಪರಿಶೀಲನೆಗಾಗಿ ಸಲ್ಲಿಸತಕ್ಕದ್ದು. (ಘಟಕದ ಮುಖ್ಯಸ್ಥರಿಂದ ವರದಿ ಸಲ್ಲಿಸಬೇಕೆನ್ನುವ ಸೂಚನೆಯನ್ನು ಸ್ವೀಕರಿಸಿದ 3 ದಿನಗಳೊಳಗಾಗಿ ಸಲ್ಲಿಸತಕ್ಕದ್ದು.)
5) ಘಟಕದ ಮುಖ್ಯಸ್ಥರು ಆ ವರದಿಯನ್ನು ಸ್ವೀಕರಿಸಿದ 2 ದಿನಗಳೊಳಗಾಗಿ ಸಿಐಡಿ ಘಟಕದ ಪೊಲೀಸ್ ಅಧೀಕ್ಷಕರು ಆಡಳಿತ ಇವರನ್ನು ಸಂಪರ್ಕಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ ಬಗ್ಗೆ ಮತ್ತು ಸ್ಥಳೀಯ ತನಿಖಾಧಿಕಾರಿಗಳೊಂದಿಗೆ ಪ್ರಕರಣವನ್ನು ಹಸ್ತಾಂತರಿಸುವ ಪೂರ್ವ ಸಭೆಯಲ್ಲಿ ಚರ್ಚಿಸಲು ದಿನಾಂಕವನ್ನು ನಿಗದಿಪಡಿಸುವ ಕುರಿತು ಕೋರಿಕೆ ಸಲ್ಲಿಸುವುದು.
6) ಸಿಐಡಿ ಘಟಕದ ಪೊಲೀಸ್ ಅಧೀಕ್ಷಕರು, ಆಡಳಿತರವರು ಸ್ಥಳೀಯ ತನಿಖಾಧಿಕಾರಿಯಿಂದ ತನಿಖೆ ಕಡತದ ಹಸ್ತಾಂತರ ಪೂರ್ವಭಾವಿ ಸಭೆಯ ದಿನಾಂಕವನ್ನು ನಿಗಧಿಪಡಿಸಿ, ಘಟಕದ ಮುಖ್ಯಸ್ಥರಿಗೆ ಮಾಹಿತಿಯನ್ನು ನೀಡುವುದು. ತದ ನಂತರ ಘಟಕದ ಮುಖ್ಯಸ್ಥರು ತನ್ನ ಸ್ಥಳೀಯ ತನಿಖಾಧಿಕಾರಿಗೆ ತನಿಖೆ ಕಡತದೊಂದಿಗೆ ನಿಗದಿತ ಪೂರ್ವಭಾವಿ ಸಭೆಯಲ್ಲಿ ಹಾಜರಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೈಗೊಂಡ ತನಿಖಾ ಕ್ರಮಗಳನ್ನು, ಸಂಗ್ರಹಿಸಿದ ಸಾಕ್ಷ್ಯಾಧಾರಗಳನ್ನು ಹಾಗೂ ಸಂಗತಿಗಳನ್ನು ಹಾಜರಿರುವ ಸಿಐಡಿ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಬಾಕಿ ಇರುವ ತನಿಖಾ ಕ್ರಮಗಳನ್ನು ಸ್ಪಷ್ಟಿಕರಣದೊಂದಿಗೆ ವಿವರಿಸುವುದು.
7) ಪೂರ್ವಭಾವಿ ಸಭೆಯಲ್ಲಿ ಹಾಜರಿರುವ ಪೊಲೀಸ್ ಅಧಿಕಾರಿಗಳಿಗೆ ತನಿಖೆಯಲ್ಲಿ ಕಡ್ಡಾಯವಿರುವ ಯಾವುದಾದರೂ ಕಾನೂನುಗಳನ್ನು ಪಾಲಿಸದೇ ಇರುವುದು ಕಂಡುಬಂದಲ್ಲಿ ಅಥವಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ಆದೇಶವಾಗಿದ್ದಲ್ಲಿ ಅಥವಾ ಸರ್ಕಾರದಿಂದ ಅಥವಾ ಪೊಲೀಸ್ ಪ್ರಧಾನ ಕಛೇರಿಯಿಂದ ಪ್ರಕರಣವನ್ನು ಹಸ್ತಾಂತರಿಸುವುದನ್ನು ತಡೆಯುವ ಯಾವುದೇ ಸೂಚನೆಗಳಿದ್ದಲ್ಲಿ, ಅಂತಹ ಪ್ರಕರಣಗಳಲ್ಲಿ ಕಡ್ಡಾಯ ಕಾನೂನುಗಳನ್ನು ಪಾಲಿಸುವವರೆಗೆ ಅಥವಾ ತಡೆಯಾಜ್ಞೆ ರದ್ದಾಗುವವರೆಗೆ ಅಥವಾ ಸರ್ಕಾರದಿಂದ ಅಥವಾ ಪೊಲೀಸ್ ಪ್ರಧಾನ ಕಛೇರಿಯಿಂದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲು ಸೂಚನೆ ನೀಡುವವರೆಗೆ, ಸಿಐಡಿಗೆ ಪ್ರಕರಣವನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಮುಂದೂಡುವುದು.
ತದನಂತರ ಸ್ಥಳೀಯ ತನಿಖಾಧಿಕಾರಿಗಳು ತನಿಖಾ ಕಡತದೊಂದಿಗೆ ಹಿಂತಿರುಗಿ, ಘಟಕದ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳುವುದು. ತನಿಖೆಯನ್ನು ಮುಂದುವರೆಸಿ ಕಡ್ಡಾಯ ನಿಯಮಗಳನ್ನು ಪಾಲಿಸಿ ತನಿಖೆಯಲ್ಲಿನ ಲೋಪ ಅಥವಾ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವುದು ನಂತರ ಘಟಕದ ಮುಖ್ಯಸ್ಥರ ಮೂಲಕ ಸಿಐಡಿ ಸಂಸ್ಥೆಗೆ ಮಾಹಿತಿ ನೀಡಿ ತನಿಖಾ ಕಡತವನ್ನು ಹಸ್ತಾಂತರಿಸಲು ಪೂರ್ವಭಾವಿ ಸಭೆಯನ್ನು ನಿಗದಿಪಡಿಸಿವಂತೆ ಕೋರುವುದು. ತದನಂತರ ನಿಗದಿಯಾದ ತನಿಖಾ ಕಡತ ಹಸ್ತಾಂತರ ಪೂರ್ವಭಾವಿ ಸಭೆಯಲ್ಲಿ ಸಿಐಡಿ ಅಧಿಕಾರಿಗಳು ಸ್ಥಳೀಯ ತನಿಖಾಧಿಕಾರಿಯ ತನಿಖೆಯ ಕ್ರಮವು ತೃಪ್ತಿಕರವೆಂದು ಅಭಿಪ್ರಾಯಪಟ್ಟ ನಂತರ ತನಿಖಾ ಕಡತವನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದು.
ಅದೇ ಪ್ರಕಾರ ಸರ್ಕಾರದಿಂದ ಅಥವಾ ಪೊಲೀಸ್ ಪ್ರಧಾನ ಕಛೇರಿಯಿಂದ ಸಿಐಡಿಗೆ ಪ್ರಕರಣದ ತನಿಖೆಯ ಕಡತವನ್ನು ಹಸ್ತಾಂತರಿಸುವಂತೆ ಮುಂದಿನ ಹಸ್ತಾಂತರಿಸುವಂತೆ ಮುಂದಿನ ಸೂಚನೆ ಸ್ವೀಕರಿಸುವವರೆಗೂ ಸ್ಥಳೀಯ ತನಿಖಾಧಿಕಾರಿ ತನಿಖೆಯನ್ನು ಮುಂದುವರೆಸುವುದು. ಸೂಚನೆ ದೊರೆತ ನಂತರ ಘಟಕದ ಮುಖ್ಯಸ್ಥರ ಮೂಲಕ ಸಿಐಡಿ ಸಂಸ್ಥೆಗೆ ಮಾಹಿತಿ ನೀಡಿ, ನಂತರ ಸಿಐಡಿಯಿಂದ ನಿಗಧಿಯಾದ ಪೂರ್ವಭಾವಿ ಸಭೆಯಲ್ಲಿ ಹಾಜರಾಗಿ ತನಿಖೆಯ ಕಡತವನ್ನು ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳುವುದು.
ಪ್ರಕರಣದ ತನಿಖೆಯು ನ್ಯಾಯಾಲಯದ ತಡೆಯಾಜ್ಞೆಯಡಿ ಸ್ಥಗಿತಗೊಂಡಿದ್ದಾಗ, ಸ್ಥಳೀಯ ತನಿಖಾಧಿಕಾರಿಗಳು ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸುವ ಕ್ರಮವನ್ನು ಕೈಗೊಳ್ಳುವುದು. ನ್ಯಾಯಾಲಯದಿಂದ ತಡೆಯಾಜ್ಞೆ ತೆರವು ಮಾಡಿದ ನಂತರ, ಆದೇಶದ ಪ್ರತಿಯನ್ನು ಪಡೆದು ಘಟಕದ ಮುಖ್ಯಸ್ಥರ ಮೂಲಕ ಸಿಐಡಿ ಸಂಸ್ಥೆಯ ಗಮನಕ್ಕೆ ತಂದು, ನಂತರ ಸಿಐಡಿಯಿಂದ ನಿಗಧಿಯಾದ ಪೂರ್ವಭಾವಿ ಸಭೆಯಲ್ಲಿ ಹಾಜರಾಗಿ ತನಿಖೆಯ ಕಡತವನ್ನು ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳುವುದು.
8) ಸಿಐಡಿ ತನಿಖಾಧಿಕಾರಿಗಳು ಮತ್ತು ಅಧಿಕಾರಿಗಳು ತನಿಖೆ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಅಥವಾ ಸಾಕ್ಷ್ಯ ಸಂಗ್ರಹಕ್ಕೆ ಸ್ಥಳದಲ್ಲಿ ಮೊಕ್ಕಾಂ ಮಾಡಿದಾಗ, ಆಯಾ ಘಟಕದ ಮುಖ್ಯಸ್ಥರು ಸಿಐಡಿ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ ತನಿಖಾ ಸಹಾಯಕರು, ಅಗತ್ಯ ಸಿಬ್ಬಂದಿ, ವಾಹನ ಮತ್ತು ಇತರೆ ಅಗತ್ಯ ವ್ಯವಸ್ಥೆಗಳನ್ನು ಪರಿಣಾಮಕಾರಿಯಾದ ಸರಾಗ ರೀತಿಯ ತನಿಖೆಗೆಗಾಗಿ ಪೂರೈಸುವುದು.
9) ತನಿಖಾ ಸಮಯದಲ್ಲಿ ಸಿಐಡಿ ತನಿಖಾಧಿಕಾರಿಗಳು ಆರೋಪಿಯನ್ನು ದಸ್ತಗಿರಿ ಮಾಡಿ ಘಟಕದ ನಿರ್ದಿಷ್ಟ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲು ಉದ್ದೇಶಿಸಿದಾಗ, ಸಿಐಡಿ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ ಘಟಕಾಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗೆ ಲಾಕಪ್ ವ್ಯವಸ್ಥೆ ಮಾಡಲು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲು ಸೂಚನೆ ನೀಡುವುದು.
10) ಘಟಕಾಧಿಕಾರಿಗಳು ಪ್ರಕರಣದ ಪರಿಣಾಮಕಾರಿ ಹಾಗೂ ಸುಗಮ ತನಿಖಾ ಪ್ರಕ್ರಿಯೆಗಾಗಿ ಸಿಐಡಿ ತನಿಖಾಧಿಕಾರಿಗಳೊಂದಿಗೆ ಸದಾ ಸಮನ್ವಯತೆ ಸಾಧಿಸುವುದು ಹಾಗೂ ಅಗತ್ಯ ಕ್ರಮಗಳನ್ನು ಕೋರಿಕೆಯ ಮೇರೆಗೆ ಕೈಗೊಳ್ಳುವುದು.
ಘಟಕದ ಮುಖ್ಯಸ್ಥರು ಹಾಗೂ ಅಧಿಕಾರಿಗಳು ತಮ್ಮ ಆಧೀನ ಪ್ರಕರಣದ ತನಿಖೆಯನ್ನು ಸಿಐಡಿ ಸಂಸ್ಥೆಗೆ ವಹಿಸಿದಾಗ ಮೇಲ್ಕಂಡ ಕ್ರಮಗಳನ್ನು ಅನುಸರಿಸಲು ಈ ಮೂಲಕ ಸೂಚಿಸಲಾಗಿದೆ.
ಶಿವಮೊಗ್ಗ: ಜೂ.21ರಂದು ಸೊರಬದ ಉಳವಿ ಸೇರಿದಂತೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING : ವಸತಿ ಯೋಜನೆಯಲ್ಲೂ ಮುಸ್ಲಿಂರಿಗೆ ಶೇ.15 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ