ಶಿವಮೊಗ್ಗ : ಅಂಗನವಾಡಿ ನೌಕರರ ಕಾರ್ಯ ಶ್ಲಾಘನೀಯವಾದದ್ದು. ನಿಮ್ಮ ನಿಷ್ಕಲ್ಮಶ ಸೇವೆಗೆ ತಕ್ಕ ಪ್ರತಿಫಲ ಸರ್ಕಾರದಿಂದ ಸಿಗಬೇಕು ಎಂದು ಸಾಗರ ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ವiತ್ತು ಸಹಾಯಕಿಯರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಅಂಗನವಾಡಿ ಪುಟ್ಟ ಮಕ್ಕಳಿಗೆ ಶುಚಿರುಚಿಯಾದ ಆಹಾರ ನೀಡುವ ಜೊತೆಗೆ ಅವರಲ್ಲಿ ಅಕ್ಷರಾಭ್ಯಾಸ ಮಾಡಿಸುವ ಉತ್ತಮ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂಗನವಾಡಿ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸರ್ಕಾರದ ವಿವಿಧ ಯೋಜನೆಗಳು ನಿಮ್ಮ ಮೂಲಕ ಯಶಸ್ವಿ ಅನುಷ್ಟಾನಗೊಳ್ಳುತ್ತಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ತಾಯಿ ಹೇಗೆ ಆರೈಕೆ ಮಾಡುತ್ತಾಳೋ, ಅಂಗನವಾಡಿಗಳಲ್ಲಿ ನೀವು ಮಕ್ಕಳನ್ನು ಜೋಪಾನವಾಗಿ ನೋಡಿ ಕೊಳ್ಳುತ್ತಿದ್ದೀರಿ. ಸರ್ಕಾರ ನಿಮಗೆ ಅನೇಕ ಜವಾಬ್ದಾರಿಯನ್ನು ನೀಡಿದ್ದು ಅದನ್ನು ಸಹ ಸಮರ್ಥವಾಗಿ ನಿಭಾಯಿಸಿದ್ದೀರಿ. ನಿಮಗೆ ಕೊಡುತ್ತಿರುವ ಗೌರವಧನ ಕಡಿಮೆ ಎನ್ನುವುದು ಗೊತ್ತಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು ನಿಮ್ಮ ಪರವಾಗಿ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ. ನಿಮ್ಮ ಸೇವಾನಿಷ್ಟೆ ಅನುಕರಣೀಯವಾದದ್ದು ಎಂದು ಹೇಳಿದರು.
ಈ ವೇಳೆ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್ ಬಿ.ಎಲ್., ಸಂಘದ ರಾಜ್ಯಾಧ್ಯಕ್ಷೆ ಬಿ. ಪ್ರೇಮಾ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಂಜಪ್ಪ ಕೆ., ಮಕ್ಕಳ ಸಂರಕ್ಷಣಾಧಿಕಾರಿ ಶಾರದಾ ಬಂಗೇರ, ಶಕುಂತಲಾ, ತ್ರಿವೇಣಿ, ವಿದ್ಯಾ, ಅನುಸೂಯ ಇನ್ನಿತರರು ಹಾಜರಿದ್ದರು. ಸೇವೆಯಿಂದ ನಿವೃತ್ತರಾದ ಸಾವಿತ್ರಿ ಬೊಬ್ಬಿಗೆ ಮತ್ತು ರಿಹಾನ ಪರ್ವಿನ್ ಅವರನ್ನು ಸನ್ಮಾನಿಸಲಾಯಿತು. ಶೀಲಾ ಟಿ.ಎನ್. ಸ್ವಾಗತಿಸಿದರು. ಚೇತನ ವಂದಿಸಿದರು. ರೂಪ ನಿರೂಪಿಸಿದರು.
ಬೇಡಿಕೆ ಈಡೇರಿಸೋ ಭರವಸೆ ನೀಡಿದರೂ ಬೆಂಗಳೂರು ಚಲೋ ನಿಲ್ಲಲ್ಲ: KSRTC ಜಂಟಿ ಕ್ರಿಯಾ ಸಮಿತಿ ಸದಸ್ಯ ಮಂಜುನಾಥ್
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








