ಮೈಸೂರು: ರೈಲ್ ಮದದ್ ದೂರಿನ ಮೂಲಕ ರೈಲಿನಲ್ಲಿ ಕಳೆದುಹೋದ ಚಿನ್ನದ ಸರ ಮಾಲೀಕರಿಗೆ ಮೈಸೂರಿನ ರೈಲ್ವೆ ರಕ್ಷಣಾ ಪಡೆ ಮರಳಿಸಿದೆ.
08 ಜೂನ್ 2025 ರಂದು ರೈಲು ಸಂಖ್ಯೆ 16231 (ತಿರುಚಿರಾಪಳ್ಳಿ – ಕೆಎಸ್ಆರ್ ಬೆಂಗಳೂರು) ನಲ್ಲಿ ಪ್ರಯಾಣಿಸಿದ ಸಾಂಗವಿ ಎಂಬ ಪ್ರಯಾಣಿಕರು 09.06.2025 ರಂದು ರೈಲ್ ಮದದ್ ಮೂಲಕ ಚಿನ್ನದ ಸರ ಕಳೆದುಹೋದ ಬಗ್ಗೆ ದೂರು ನೀಡಿದ್ದಾರೆ. ಬೋಗಿ ಸಂಖ್ಯೆ B1, ಸೀಟು ಸಂಖ್ಯೆ 71 ನಲ್ಲಿ ಪ್ರಯಾಣಿಸುತ್ತಿದ್ದು, ತಾನು ಶೌಚಾಲಯಕ್ಕೆ ಹೋಗಿದ್ದಾಗ ಚಿನ್ನದ ಸರ ಶೌಚಾಲಯದಲ್ಲಿ ಬಿದ್ದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರನ್ನು ದಾಖಲಿಸಿ ಸಂಬಂಧಿತ ಬೋಗಿಯನ್ನು ಮೈಸೂರಿನಲ್ಲಿ ಪ್ರಾಥಮಿಕ ನಿರ್ವಹಣೆ ಮಾಡಲಾಯಿತು.
ದೂರನ್ನು ಪೂರಕವಾಗಿ ಗಮನಿಸಿ, ನಿರ್ವಹಣಾ ತಂಡವು ಬಯೋ-ಟಾಯ್ಲೆಟ್ ಟ್ಯಾಂಕ್ ಅನ್ನು ತೆರೆದು ಶುದ್ಧಪಡಿಸುವ ಕಾರ್ಯಾಚರಣೆ ವೇಳೆ, ಕಳೆದುಹೋದ ಚಿನ್ನದ ಸರವನ್ನು ಪತ್ತೆ ಹಚ್ಚಿತು. ಆ ಚಿನ್ನದ ಸರವನ್ನು ತಕ್ಷಣವೇ ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಅಧಿಕಾರಿಗಳಿಗೆ ಹಸ್ತಾಂತರಿಸಿ, ಅಗತ್ಯ ಕಾನೂನು ಕ್ರಮಗಳು ಕೈಗೊಳ್ಳಲಾಯಿತು ಮತ್ತು ಮಾಲಿಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಕ್ರಮ ಕೈಗೊಳ್ಳಲಾಯಿತು.
ಈ ಘಟನೆ ರೈಲ್ವೆ ನಿರ್ವಹಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಸಮನ್ವಯತೆ ಮತ್ತು ಬದ್ಧತೆಯನ್ನು ತಿಳಿಸುತ್ತದೆ ಹಾಗೂ ಪ್ರಯಾಣಿಕರಿಂದ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ಹಿಂತಿರುಗಿಸಲು ರೈಲ್ವೆ ಶ್ರಮಿಸುತ್ತಿರುವುದನ್ನು ಬಿಂಬಿಸುತ್ತದೆ.
ಪ್ರಯಾಣಿಕರು ಯಾವುದೇ ವಸ್ತು ಕಳೆದುಹೋದರೆ ಅಥವಾ ತೊಂದರೆ ಎದುರಾದರೆ ತಕ್ಷಣವೇ ರೈಲ್ ಮದದ್ ಮೂಲಕ ದೂರು ನೀಡಲು ಮನವಿ ಮಾಡಲಾಗುತ್ತಿದೆ, ಇದರಿಂದ ಸಂಬಂದಿತ ತಂಡಗಳು ತಕ್ಷಣ ಸ್ಪಂದಿಸಿ ಸಹಾಯಕ್ಕೆ ಮುಂದಾಗುವರು ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.